ಬೆಂಗಳೂರು: ಯಾಕ್ ಗುರಾಯಿಸ್ತಾ ಇದಿಯಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹೊಯ್ಸಳ ನಗರದ ಮನೋಜ್ (22) ಕೊಲೆಯಾದ ವ್ಯಕ್ತಿ, ಶನಿವಾರ ಸಂಜೆ ಹೊಯ್ಸಳ ನಗರದ ಮೂರನೇ ಮುಖ್ಯರಸ್ತೆ ಬಳಿ ಈ ಘಟನೆ ನಡೆದಿದೆ.
ಹೊಯ್ಸಳ ನಗರದ ಬಳಿ ಮನೋಜ್ ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದಾಗ ಎದುರಿಗೆ ಬಂದ ವ್ಯಕ್ತಿ ಇವನನ್ನ ನೋಡುತ್ತಿದ್ದ. ಈ ವೇಳೆ ಯಾಕಪ್ಪ ಗುರಾಯಿಸ್ತಾ ಇದೀಯ ಎಂದು ಪ್ರಶ್ನೆ ಮಾಡಿದ್ದಾನೆ, ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ, ಜಗಳ ವಿಕೋಪಕ್ಕೆ ತಿರುಗಿ ಮನೋಜ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಅವಘಡ: ಮೂರು ಅಂತಸ್ತಿನ ಬೇಕರಿ ಬೆಂಕಿಗಾಹುತಿ!
ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮನೋಜ್ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.