ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್, ಜೈಲಿನಲ್ಲಿ ಕುಖ್ಯಾತ ರೌಡಿಯೊಬ್ಬನ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಮೂರು ಕೊಲೆಗಳನ್ನು ಮಾಡಿ ಜೈಲು ಸೇರಿರುವ ಕುಖ್ಯಾತ ರೌಡಿ ಸುನೀಲ್ ಅಲಿಯಾಸ್ ಸಿದ್ದಾಪುರ ಸುನೀಲ್, ತನ್ನ ಬರ್ತಡೇ ಆಚರಿಸಿಕೊಂಡಿದ್ದಾನೆ. ಕಳೆದ ಭಾನುವಾರ ಮಧ್ಯ ರಾತ್ರಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸುನೀಲ್ ಬರ್ತಡೆ ಆಯೋಜಿಸಲಾಗಿತ್ತು. ಈ ಬರ್ತಡೇ ಪಾರ್ಟಿಯಲ್ಲಿ ಅದೇ ಜೈಲಿನಲ್ಲಿರುವ ದರ್ಶನ್ ಸಹ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ದರ್ಶನ್ ಅವರು ತೂಕದಲ್ಲಿ ಕಮ್ಮಿಯಾದಂತೆ ಕಾಣುತ್ತಿದ್ದಾರೆ: ತರುಣ್ ಸುಧೀರ್
ಶಾಂತಿನಗರ ಲಿಂಗ, ಸುಹೇಲ್ ಮತ್ತು ಮಹೇಶ್ ಎಂಬುವರ ಹತ್ಯೆ ಪ್ರಕರಣದಲ್ಲಿ ಸುನೀಲ್ ಭಾಗಿಯಾಗಿದ್ದಾನೆ. ಭೂಗತ ಪಾತಕಿ ವಿಲ್ಸನ್ ಗಾರ್ಡನ್ ನಾಗನ ಅತ್ಯಾಪ್ತನೂ ಆಗಿರುವ ಸುನೀಲ್ ಜತೆ ದರ್ಶನ್ ಗೆ ಮೊದಲಿನಿಂದಲೂ ಒಡನಾಟವಿತ್ತು. ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ ನಂತರ, ಜೈಲಿನಲ್ಲಿ ಎಲ್ಲ ಹಳೆ ರೌಡಿಗಳು ದರ್ಶನ್ ಜತೆ ಆಪ್ತತೆಯಿಂದ ವರ್ತಿಸುತ್ತಿದ್ದಾರೆ.
ತಮ್ಮ ಬಳಿಗೆ ಬರುವ ಎಲ್ಲ ಪಾತಕಿಗಳನ್ನು ದರ್ಶನ್ ಚಿನ್ನ ಎಂದೇ ಮಾತನಾಡಿಸುತ್ತಾರಂತೆ. ದರ್ಶನ್ ಅಭಿಮಾನಿಗಳಾಗಿರುವ ಖೈದಿಗಳು ಅವರಿಗೆ ಬ್ಯಾರಕ್ ನಲ್ಲೇ ಊಟ ತಿಂಡಿ ಪೂರೈಸುತ್ತಾರಂತೆ. ಭಾನುವಾರ ರಾತ್ರಿಯೂ ದರ್ಶನ್, ಸಹ ಖೈದಿಗಳ ಜತೆ ತಮ್ಮ ಬ್ಯಾರಕ್ ನಲ್ಲೇ ಬಾಡೂಟ ಮಾಡಿ, ಸುನೀಲ್ ನ ಹುಟ್ಟಿದ ಹಬ್ಬದ ಪಾರ್ಟಿ ಮಾಡಿದ್ರು ಎಂದು ಮೂಲಗಳು ತಿಳಿಸಿವೆ.