ಚನ್ನೈ: ದಕ್ಷಿಣ ಚಿತ್ರರಂಗದ ಖ್ಯಾತ ನಟ ಸೂರ್ಯ ಅಭಿಮಾನಿಗಳೊಂದಿಗೆ ರಕ್ತದಾನ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ನಟ ಸೂರ್ಯ ಅಭಿಮಾನಿಗಳು ಕಳೆದ ಕೆಲ ವರ್ಷಗಳಿಂದ ರಕ್ತದಾನ, ಪುಸ್ತಕ ದಾನ, ಮರ ನೆಡುವಿಕೆ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ತಮ್ಮ ಮೆಚ್ಚಿನ ನಟನ ಜನ್ಮದಿನದ ಸಂದರ್ಭ 2,000ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದ್ದರು. ಮುಂದಿನ ವರ್ಷ ಈ ಕಾರ್ಯದಲ್ಲಿ ತಾನೂ ಭಾಗವಹಿಸುವುದಾಗಿ ಸೂರ್ಯ ಭರವಸೆ ನೀಡಿದ್ದರು. ಅದರಂತೆ ಇದೀಗ ನಟ ತಾನು ಕೊಟ್ಟ ಮಾತು ನೆರವೇರಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಕಿಚ್ಚನ ಪ್ಯಾನ್ ಇಂಡಿಯಾ ಮ್ಯಾಕ್ಸಿಮಮ್ ದಂಡಯಾತ್ರೆ ಶುರು!: ಕಾಳಿ ಮುಂದೆ ಸ್ಟೆಪ್ಸ್ಗೆ ಪ್ರೇಕ್ಷಕ ಸ್ಟನ್
ಜುಲೈ 23ರಂದು (ಮುಂದಿನ ಮಂಗಳವಾರ) ಸೂರ್ಯ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಸೋಮವಾರದಂದು ತಮ್ಮ ಅಭಿಮಾನಿಗಳೊಂದಿಗೆ ರಕ್ತದಾನ ಮಾಡಿದ್ದಾರೆ. ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋ ನಿಟ್ಟಿನಲ್ಲಿ ಈ ರಕ್ತದಾನದಲ್ಲಿ 400ಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗಿದ್ದರು. ಈ ಕಾರ್ಯ ಮುಂದುವರಿಯಲಿದೆ. ಕಳೆದ ದಿನ ನಟನ ಫೋಟೋ – ವಿಡಿಯೋಗಳು ವೈರಲ್ ಆದ ನಂತರ ಅನೇಕರು ಸ್ಫೂರ್ತಿ ಪಡೆದಿದ್ದು, ಇಂತಹ ಮಾನವೀಯ ಕಾರ್ಯ ಕೈಗೊಳ್ಳಲು ಮುಂದಾಗುತ್ತಿದ್ದಾರೆ.
ನಟನ ಸಿನಿಮಾ ವಿಚಾರ ಗಮನಿಸುವುದಾದರೆ, ಬಹುನಿರೀಕ್ಷಿತ ‘ಕಂಗುವ’ ಬಿಡುಗಡೆಗಾಗಿ ಅಭಿಮಾನಿಗಳು ಸೇರಿದಂತೆ ಚಿತ್ರತಂಡ ಎದುರು ನೋಡುತ್ತಿದೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದು, ಬಾಬಿ ಡಿಯೋಲ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಯೋಗಿ ಬಾಬು ಮತ್ತು ಮೃಣಾಲ್ ಠಾಕೂರ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಸಾಲಿನ ಅಕ್ಟೋಬರ್ 10ರಂದು ‘ಕಂಗುವ’ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.