ಮಂಡ್ಯ: ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಗಣಿ ಅಕ್ರಮದ ಕರಾಳತೆಯನ್ನು ಲೋಕಾಯುಕ್ತ ತನಿಖಾ ವರದಿ ಬಿಚ್ಚಿಟ್ಟಿದೆ.. ಅಕ್ರಮಕ್ಕೆ ಸಿಎಂ ಅಪರ ಕಾರ್ಯದರ್ಶಿ ಸೇರಿ 12 ಅಧಿಕಾರಿಗಳು ಸಾಥ್ ನೀಡಿರುವುದನ್ನು ಬಯಲಿಗೆ ಎಳೆದಿದೆ. ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ದದ್ದಲ್ ಹಣದ ರಹಸ್ಯ ಬಯಲು!
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರುಳಿ, ಹೊನಗಾನಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಕೆಲವು ಸರ್ಕಾರಿ ಅಧಿಕಾರಿಗಳ ನೆರವಿನಿಂದ ಅಕ್ರಮ ಗಣಿಗಾರಿಕೆ ನಡೆದಿದೆ. 2003-04ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಅಕ್ರಮ ಗಣಿಗಾರಿಕೆ ನಡೆದಿದೆ. ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟವಾಗಿದೆ ಎಂಬುದು ಅಧೀಕ್ಷಕರಿಗೆ ಲೋಕಾಯುಕ್ತ DySP ಸಲ್ಲಿಸಿರುವ ವರದಿಯಿಂದ ಬಹಿರಂಗವಾಗಿದೆ. ಜೂನ್ 14ರಂದು ಸಲ್ಲಿಸಿರುವ ವರದಿಯಲ್ಲಿ ಸಿಎಂ ಅಪರ ಕಾರ್ಯದರ್ಶಿ ಎಸ್.ಜಿಯಾವುಲ್ಲಾ ಹೆಸರು ಉಲ್ಲೇಖವಾಗಿದೆ. ಮಂಡ್ಯ ಡಿಸಿಯಾಗಿದ್ದ ಜಿಯಾವುಲ್ಲಾ, ಪ್ರಸ್ತುತ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿಯಾಗಿದ್ದಾರೆ. 12 ಅಧಿಕಾರಿಗಳು ಕರ್ತವ್ಯ ಲೋಪವೆಸಗಿರುವ ಬಗ್ಗೆ ವರದಿಯಲ್ಲಿ ಬಿಡಿ ಬಿಡಿಯಾಗಿ ಉಲ್ಲೇಖಿಸಲಾಗಿದೆ. ಇದೀಗ ದೂರುದಾರ ಕೆ.ಆರ್.ರವೀಂದ್ರ ಲೋಕಾಯುಕ್ತ ಡಿವೈಎಸ್ಪಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.