ಹಾವೇರಿ: ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸಾರಿಗೆ ಸಂಸ್ಥೆಗಳ ಡ್ರೈವರ್, ಕಂಡಕ್ಟರ್ಗಳಿಗೂ ಹೊಸ ಶಕ್ತಿ ಬಂದಂತಾಗಿದೆ. ಎಲ್ಲಾ ಬಸ್ಗಳೂ ರಶ್ಶೋ ರಶ್.. ಹೆದ್ದಾರಿಯಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಂತೂ ಬಸ್ಗಳು ನಿಲ್ಲುವುದೇ ದುಸ್ತರವಾಗಿದೆ. ಚಲಿಸುವ ಬಸ್ನಲ್ಲಿ ಮಕ್ಕಳು ಫುಟ್ ಬೋರ್ಡ್ ಮೇಲೆ ನಿಂತು ಸಾಗುವ ಸಾಕಷ್ಟು ದೃಶ್ಯಗಳು ವೈರಲ್ ಆಗಿವೆ. ಹಾಗೇನೆ ಬಸ್ಗಳಲ್ಲಿ ಸೀಟ್ ಗಲಾಟೆ, ಕಂಡಕ್ಟರ್ ಜೊತೆ ಪ್ರಯಾಣಿಕರ ಗಲಾಟೆ ಮಾಮೂಲು ಎಂಬಂತಾಗಿದೆ. ಇಂಥದ್ದೇ ಗಲಾಟೆಯೊಂದು ವಿಕೋಪಕ್ಕೆ ತಿರುಗಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ವಿದ್ಯಾರ್ಥಿಯ ಕಪಾಳಕ್ಕೆ ಕಂಡಕ್ಟರ್ ಹೊಡೆದಿದ್ದಾರೆ ಎಂದು ಆರೋಪಿಸಿ ಹಾವೇರಿ ಬಸ್ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ. ಬಸ್ನಲ್ಲಿ ಅನುಚಿತ ವರ್ತನೆ ತೋರಿದ್ದಕ್ಕಾಗಿ ಕಂಡಕ್ಟರ್ ಥಳಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ ತಮ್ಮ ಮೇಲಿನ ಆರೋಪವನ್ನು ವಿದ್ಯಾರ್ಥಿ ತಳ್ಳಿ ಹಾಕಿದ್ದಾನೆ. ಕಂಡಕ್ಟರ್ ತಾಳ್ಮೆ ಕಳೆದುಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾನೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮದ ಸುಳಿಯಲ್ಲಿ ಶಾಸಕರ ಪಿಎ! ದದ್ದಲ್ಗೂ ಸಂಕಷ್ಟನಾ?
ಹಾವೇರಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಪರವಾಗಿ ನೂರಾರು ಮಕ್ಕಳು ಜೊತೆಗೂಡಿ ಪ್ರತಿಭಟಿಸಿದ್ದಾರೆ. ಬಸ್ ನಿಲ್ದಾಣದಿಂದ ಯಾವುದೇ ಬಸ್ ಹೋಗದಂತೆ ತಡೆದು ಕಂಡಕ್ಟರ್, ಡ್ರೈವರ್ ಅಮಾನತಿಗೆ ಒತ್ತಾಯಿಸಿದ್ದಾರೆ. ದಿಢೀರನೆ ಪ್ರತಿಭಟನೆಗೆ ದೂರದೂರಿಗೆ ಸಾಗುವ ಜನ ಕಂಗಾಲಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಕೊನೆಗೂ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.