₹187 ಕೋಟಿ ಅಕ್ರಮ ನಡೆದಿರುವ ವಾಲ್ಮೀಕಿ ನಿಗಮದ ಹಗರಣದಲ್ಲಿ ಈಗಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಅವರ ಪಿಎ ಹರೀಶ್ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಶಾಸಕರೂ ಆಗಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೂ ಆತಂಕ ಕಾಡುತ್ತಿದೆ. ಯಾಕೆಂದರೆ ಶಾಸಕರ ಪಿಎ ಪಂಪಣ್ಣ ಖಾತೆಗೂ ಎರಡು ಬಾರಿ ಹಣ ವರ್ಗಾವಣೆಯಾಗಿದೆ.
ಪಂಪಣ್ಣ ಖಾತೆಗೆ ಮೊದಲ ಬಾರಿ ಕೇವಲ ₹5 ಮಾತ್ರ ಸಂದಾಯವಾಗಿದೆ. ಆ ಬಳಿಕ 2ನೇ ಹಂತದಲ್ಲಿ ಒಂದೇ ಬಾರಿ ₹55 ಲಕ್ಷ ವರ್ಗಾವಣೆಯಾಗಿದೆ. ಈಗಾಗಲೇ ಒಟ್ಟಾರೆ ಹಣ ವರ್ಗಾವಣೆ ಬಗ್ಗೆ ತನಿಖೆಗೆ ಇಡಿ ಮುಂದಾಗಿದೆ. ಬುಧವಾರ ಬೆಳಗ್ಗೆಯೇ ನಾಗೇಂದ್ರ ಜೊತೆ ದದ್ದಲ್ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಪಂಪಣ್ಣ ವಿಚಾರಣೆ ವೇಳೆ ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಹೋದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ: ಬಟ್ಟೆ ಹೊತ್ತೊಯ್ದ ಪೊಲೀಸರು
ಪಿಎ ಪಂಪಣ್ಣ ಇಡಿ ಅಧಿಕಾರಿಗಳ ಸುಳಿಯಲ್ಲಿ ಸಿಲುಕಿದರೆ ಶಾಸಕ ಬಸನಗೌಡ ದದ್ದಲ್ ಸಹ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರಾ ಎಂಬುವುದೇ ಈಗಿರುವ ಆತಂಕ. ನಿಗಮದ ಎಂಡಿ ಪದ್ಮನಾಭ, ಅಕೌಂಟೆಂಟ್ ಪರಶುರಾಮ್ ಜೊತೆ ಮಾತನಾಡಿದ ವೇಳೆ ಅಧ್ಯಕ್ಷರ ಮಾಹಿತಿ ಸದ್ಯಕ್ಕೆ ನೀಡುವುದು ಬೇಡ ಎನ್ನಲಾಗಿದೆ. ಆ ಆಡಿಯೋ ಕೂಡ ಎಲ್ಲೆಡೆ ವೈರಲ್ ಆಗಿದೆ. ಹಾಗಿದ್ರೆ ಪಿಎ ಖಾತೆಗೆ ಹಣ ಜಮೆಯಾಗಿರುವುದು ಯಾಕೆ? ಹಣ ಹಾಕಿದವರು ಯಾರು? ಯಾಕೆ ಹಣ ಹಾಕಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿ ಎದುರಾಗಲಿವೆ. ಈ ಬಗ್ಗೆ ತನಿಖೆಯಲ್ಲಿ ಶಾಸಕರು ಸಹ ಸಿಲುಕುತ್ತಾರಾ ಅನ್ನೋದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.