ಬೆಂಗಳೂರು: ಮುಡಾ ಹಗರಣ ನಡೆದಿದೆ ಎಂದು ಇಷ್ಟೆಲ್ಲಾ ದಾಖಲೆಗಳು ಹೇಳುತ್ತಿದ್ದರು ಸಹ ಸಿಎಂ ಸಿದ್ದರಾಮಯ್ಯ ಬಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಪಾರದರ್ಶಕತೆಯನ್ನೂ ಕಾಪಾಡಿಕೊಂಡಿಲ್ಲ ಹಾಗು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡಿಲ್ಲ, ನೀವು ನಿರಪರಾಧಿ ಹೌದೋ ಅಲ್ಲವೋ ಎಂದು ತೀರ್ಮಾನವಾಗುವವರೆಗೂ ನೀವು ಅಪರಾಧಿಯೇ ಹಾಗಾಗಿ ಈ ಕೂಡಲೇ ರಾಜೀನಾಮೇ ನೀಡಬೇಕು ಎಂದು ಒತ್ತಾಯ ಮಾಡಿದರು.
ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಯಾಗಬೇಕು ಎಂದು ಈಗಾಗಲೇ ಹಲವರು ಕೇಳಿದ್ದಾರೆ. ಈ ಜಮೀನಿನ ಖರೀದಿ, ಡೀನೋಟಿಫಿಕೇಷನ್, ಪಾರುಪತ್ರ, ಜಮೀನಿಗೆ ಸಂಬಂಧಿಸಿ ಚುನಾವಣಾ ಅಫಿಡವಿಟ್ನಲ್ಲಿ ಆಸ್ತಿ ಮರೆ ಮಾಚಿರುವುದು ಈ ಎಲ್ಲದರ ಕಾರಣಕ್ಕೆ ಅವರು ರಾಜೀನಾಮೆ ಕೊಡಲೇಬೇಕು, ಖರೀದಿಯಿಂದ ಹಿಡಿದು ಅಫಿಡವಿಟ್ಟಿನ ವರೆಗೆ ಸಿಎಂ ಸಿದ್ದರಾಮಯ್ಯನವರ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಇವೆಲ್ಲವುದರ ಬಗ್ಗೆ ತನಿಖೆಯಾಗಬೇಕು. ಅದೂ ನ್ಯಾಯಾಂಗ ತನಿಖೆಗೂ ಮುನ್ನ ಸಿದ್ದರಾಮಯ್ಯ ರಾಜೀನಾಮೇ ನೀಡಲೇಬೇಕು ಎಂದು ಒತ್ತಾಯ ಮಾಡಿದರು.