ಧಾರವಾಡ: ರಾಜ್ಯ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿ ಪಂಚಮಸಾಲಿ ಸಮುದಾಯ ಪತ್ರ ಚಳವಳಿ ಆರಂಭಿಸಿದೆ. ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರಾದ ಎಂ.ಆರ್.ಪಾಟೀಲ್ ಹಾಗೂ ಅರವಿಂದ ಬೆಲ್ಲದ್ ಮನೆಯಲ್ಲಿ ಪತ್ರ ಚಳವಳಿ ನಡೆಸಲಾಯಿತು.
ಇದನ್ನು ಓದಿ: ಚಿನ್ನ ಗೆದ್ದು, ತಂದುಕೊಡುವೆ: ಮೋದಿಗೆ ಚೋಪ್ರಾ ವಾಗ್ದಾನ
ಅಧಿವೇಶನದಲ್ಲಿ ಮೀಸಲಾತಿ ಹಕ್ಕು ಪ್ರತಿಪಾದಿಸಲು ಪಂಚಮಸಾಲಿ ಸಮಾಜದ ಶಾಸಕರು ಮುಂದಾಗಬೇಕೆಂದು ಪತ್ರ ಚಳುವಳಿ ಆರಂಭಿಸಿದ್ದಾರೆ. ಕಳೆದ ಐದು ವರ್ಷಗಳಿಂದಲೂ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ. ತಮ್ಮ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಿ ಎಂದು ಪಂಚಮಸಾಲಿಗಳು ಹೋರಾಟ ನಡೆಸುತ್ತಿದ್ದಾರೆ.
ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯ ಆಗುತ್ತಿದೆ ಹಾಗೂ ಅವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂಬುದು ಹೋರಾಟಗಾರರ ವಾದವಾಗಿದೆ. ಸುಮಾರು ಮೂವತ್ತನಾಲ್ಕು ವೀರಶೈವ ಲಿಂಗಾಯತ ಒಳಪಂಗಡಗಳು ಈಗಾಗಲೇ 2ಎ ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಆದರೆ ಕೃಷಿ ಮೂಲ ಕಸುಬು ಮಾಡುತ್ತಾ ಬಂದಿರುವ ಪಂಚಮಸಾಲಿಗಳಿಗೆ ಮೀಸಲಾತಿ ಸೌಲಭ್ಯ ಇಲ್ಲ. ಇದರಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮೀಸಲಾತಿ ನೀಡಬೇಕು ಎಂಬುವುದು ಪಂಚಮಸಾಲಿಗಳ ವಾದವಾಗಿದೆ.