ದಾವಣಗೆರೆ: ಲಾಕಪ್ ಡೆತ್ ಪ್ರಕರಣ ಸಂಬಂಧ ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಸಂಬಂಧಿಕರು ಹಿಗ್ಗಾಮುಗ್ಗಾ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ ಸಂಬಂಧ ನೂರಕ್ಕೂ ಅಧಿಕ ಮಂದಿ ಮೇಲೆ FIR ದಾಖಲಾಗಿದೆ. ಎಸ್ಪಿ ಉಮಾ ಪ್ರಶಾಂತ್ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.
ಮಟ್ಕಾ ಆಡಿಸುತ್ತಿದ್ದ ಹಿನ್ನಲೆ ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದರು. ಇದ್ದಕ್ಕಿದ್ದಂತೆ ಬಿಪಿ ಲೋ ಆಗಿ ಬಿದ್ದ ಅದಿಲ್ನನ್ನು ಪೊಲೀಸರು ಅಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಇಂದು 6ನೇ ಹಂತದ ಲೋಕಸಭೆ ಚುನಾವಣೆ: ಮತದಾನ ಪ್ರಕ್ರಿಯೆ ಆರಂಭ
ಇದೀಗ ಅದಿಲ್ ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಕರು ಅಕ್ರೋಶಗೊಂಡಿದ್ದಾರೆ. ಸಾವನ್ನಪ್ಪಿದ ಅರೋಪಿ ಸಂಬಂಧಿಕರನ್ನು ಚನ್ನಗಿರಿ ಡಿವೈಸ್ಪಿ ಪ್ರಶಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಸಧ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನೆ ಸಂಬಂಧ ಮೃತನ ಸಂಬಂಧಿಕರು ಪೊಲೀಸ್ ಠಾಣಾ ಆವರಣದಲ್ಲಿದ್ದ ಮೂರು ಪೊಲೀಸ್ ಜೀಪ್ ಗಳಿಗೆ ಹಾನಿ ಮಾಡಿದ್ದಾರೆ. ಠಾಣೆ ಕಿಟಕಿ ಗಾಜು ಪುಡಿಪುಡಿ, ಠಾಣೆಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಠಾಣೆ ಮುಂಭಾಗದ ಧ್ವಜ ಕಂಬ ಕಿತ್ತಾಕಿ ಆಕ್ರೋಶ ಹೊರಹಾಕಿದ್ದಾರೆ.