ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಆರ್ಯ ವೈಶ್ಯ ಸಮಾಜದ ವತಿಯಿಂದ ವಾಸವಿ ಜಯಂತಿಯನ್ನು ಗ್ರಾಮದ ಲಕ್ಷ್ಮೀ ವೆಂಕಟರಮಸ್ವಾಮಿ ದೇವಾಲಯದಲ್ಲಿ, ಕುಲದೇವತೆ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ವಾಸವಿ ಅಷ್ಟೋಧಕ, ಮಹಾಮಂಗಳಾರತಿ, ತೊಟ್ಟಿಲು ಸೇವೆ, ಪುಷ್ಪಾರ್ಚನೆ, ಮಾಡಿ ಪ್ರಸಾದ ವಿನಿಯೋಗ ಮಾಡುವುದರ ಮೂಲಕ ಆಚರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ, ತೂಬಗೆರೆ ಆರ್ಯ ವೈಶ್ಯ ಸಮಾಜದ ಮುಖಂಡ ಅಶೋಕ್ ಕುಮಾರ್ ಮಾತನಾಡಿ, ಶ್ರೀವಾಸವಿ ಮಾತೆಯು ಜನ್ಮ ತಾಳಿದ ಉದ್ದೇಶ ಸರ್ವ ಮನುಷ್ಯರು ದೇಹಾಭಿಮಾನವನ್ನು ತ್ಯಾಗಮಾಡಿ, ಆತ್ಮಾಭಿಮಾನಿಗಳಾಗಬೇಕು ಎನ್ನುವುದಾಗಿದೆ. ಅಂದರೆ ಯಾವುದೇ ಮನುಷ್ಯನು ವಸ್ತುಗಳಿಗೆ, ವೈಭೋಗಗಳಿಗೆ ಮತ್ತು ಇಹಲೋಕದ ಭೋಗ, ಲಾಲಸೆಗಳಿಗೆ ವಶನಾಗದೇ, ಮುಕ್ತಿ ಸಾಧನೆಗಾಗಿ ತನ್ನನ್ನು ತಾನು ಭಗವಂತನಿಗೆ ಸತ್ಯ ಮನಸ್ಸಿನಿಂದ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಮುಖಾಂತರ ಶರಣಾಗಬೇಕು ಎಂದು ತಿಳಿಸುವುದೇ ಶ್ರೀ ವಾಸವಿ ಮಾತೆಯ ಅವತಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಇದನ್ನೂ ಓದಿ: ಸಮಾಜಕ್ಕೆ ನಂಬಿಕೆ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳ ಅಗತ್ಯವಿದೆ: ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್
ಕಾರ್ಯಕ್ರಮಕ್ಕೂ ಮುನ್ನ ವಾದ್ಯ-ಮೇಳದೊಂದಿಗೆ ಆರತಿಗಳನ್ನು ಹಿಡಿದ ಹೆಂಗಸರು, ಗ್ರಾಮದ ತೇರಿನಬೀದಿಯಲ್ಲಿ ಸಂಚರಿಸಿ ವಾಸವಿತಾಯಿಗೆ ಅರ್ಪಿಸಿದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು.
ಈ ವೇಳೆ ತೂಬಗೆರೆ ಆರ್ಯ ವೈಶ್ಯ ಸಮಾಜದ ಮುಖಂಡರಾದ ವೆಂಕಟೇಶ್ ಕುಮಾರ್ (ಅಪ್ಪಾಲಿ), ಮೋಹನ್ ಗುಪ್ತ, ಯುವ ಮುಖಂಡ ಉದಯ ಆರಾಧ್ಯ, ಗ್ರಂಥಪಾಲಕ ಮಂಜುನಾಥ್, ಅರ್ಚಕ ನಾಗರಾಜ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.