ಬಳ್ಳಾರಿ : ಬೈಕ್ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಯುವಕ ಮೃತಪಟ್ಟಿರುವ ಭೀಕರ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದ ಹೊಸಪೇಟೆ ಬೈಪಾಸ್ ಬಳಿ ನಡೆದಿದೆ.
ಡೋಣಿಮಲೈ ಗ್ರಾಮದ ನಾಗರಾಜ್ (25) ಲಾರಿ ಚಕ್ರದಡಿ ಸಿಲುಕಿ ಸಾವನ್ನಪ್ಪಿರುವ ಯುವಕ. ಲಾರಿ ಹರಿದ ಪರಿಣಾಮ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ನಾಗರಾಜ್ ಬೈಕ್ನಲ್ಲಿ ಮುಂದೆ ಹೋಗುತ್ತಿದ್ದರು. ಹಿಂಬಂದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಅವರ ಮೇಲೆ ಹರಿದಿದೆ. ಬೈಕ್ ಸಮೇತ ಲಾರಿ ಚಕ್ರಕ್ಕೆ ಸಿಲುಕಿದ ನಾಗರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಟಿಪ್ಪರ್ ಲಾರಿ ಹರಿದಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.