ಬೆಂಗಳೂರು : ಸಿಎಂ ಕುರ್ಚಿಯ ಗಲಾಟೆ ಪಕ್ಷದ ಒಳಗಿನದ್ದು, ಇದರಿಂದ ನಮ್ಮ ಸರ್ಕಾರ ಬೀಳಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಹೇಳಿದ್ದಾರೆ ಅಷ್ಟೇ ಅವರು ಎಂದು ತಿಳಿಸಿದ್ದಾರೆ.
ಸಿಎಂ ಸ್ಥಾನದ ಗಲಾಟೆ ನಮ್ಮ ಪಕ್ಷದ ಒಳಗಿನದ್ದು, ಈ ಸಮಸ್ಯೆ ಇದ್ದೇ ಇರುತ್ತದೆ. ಆಡಳಿತ ಮಾಡುವಾಗ ಸಮಸ್ಯೆ ಇರುತ್ತದೆ. ಅದಕ್ಕೆ ಸರ್ಕಾರ ಬೀಳಿಸಲು ಆಗಲ್ಲ. ಅವರಿಗೆ ಮಾತನಾಡಲು ಸ್ವತಂತ್ರ ಇದೆ, ಮಾತನಾಡ್ತಾರೆ. ಆ ರೀತಿಯ ಪ್ರಶ್ನೆ ಉದ್ಭವಿಸಲ್ಲ. ನಮ್ಮ ಸರ್ಕಾರ ನಾಲ್ಕು ವರ್ಷ ಇರಲಿದೆ ಎಂದು ಹೇಳಿದ್ದಾರೆ.
ಶಾಸಕರ ಅಸಮಾಧಾನ ಇದೆ
ಭಿನ್ನಮತ ಇದೆ ಅಂತ ಸರ್ಕಾರ ಬೀಳಿಸೋದಕ್ಕೆ ಆಗುತ್ತಾ? ಶಾಸಕರ ಅಸಮಾಧಾನ ಇದೆ, ಅದಕ್ಕಾಗಿ ಸರ್ಕಾರ ಬೀಳೋದಿಲ್ಲ. ಅಭಿವೃದ್ಧಿ, ವರ್ಗಾವಣೆ ಕುರಿತು ಸಮಸ್ಯೆ ಇರುತ್ತದೆ ಅದಕ್ಕಾಗಿ ಸರ್ಕಾರ ಬೀಳಲ್ಲ. ಸಮಸ್ಯೆ ಇದ್ದರೆ ನಾವು ಬಗೆಹರಿಸಿಕೊಳ್ತೀವಿ. ಮಹರಾಷ್ಟ್ರದ್ದು ಬೇರೆ ಕರ್ನಾಟಕದ್ದು ಬೇರೆ ಕಥೆ. ಜಿಗಿಯಲು ಐದಾರು ಮೀಟರ್ ಆಗುತ್ತೆ, ಹದಿನೈದು ಮೀಟರ್ ಜಿಗಿಯಲು ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ, ಡಿಸಿಎಂ ಬಳಿ ಕೇಳಬೇಕು
ಸಚಿವ ಸಂಪುಟ ಪುನರಚನೆ ವಿಚಾರ ಕುರಿತು ಮಾತನಾಡಿ, ಅದನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಕೇಳಬೇಕು. ಅದನ್ನ ಡಿಸೈಡ್ ಮಾಡೋದು ಅವರೇ. ನಮಗೆ ಗೆಲ್ಲಿಸಿಕೊಂಡು ಬರಬೇಕು ಅನ್ನೋದು ಇದೆ. ಅದಕ್ಕಾಗಿ ಯಾವುದೇ ನಿಯಮ ಹಾಕಿಲ್ಲ. ಹೈ ಕಮಾಂಡ್ ಆ ರೀತಿಯ ಯಾವುದೇ ನಿಯಮ ಹಾಕಿಲ್ಲ ಎಂದು ಹೇಳಿದ್ದಾರೆ.