ಯಾದಗಿರಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಯಾದಗಿರಿ ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಹುಣಸಗಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸುರಪುರ ತಾಲೂಕಿನ ಏವೂರು ಸರ್ಕಾರಿ ಶಾಲೆಯ ಶಿಕ್ಷಕ ಸಾಹೇಬ್ಗೌಡ ಮತ್ತು ಸುರಪುರ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸುರಪುರ ತಾಲೂಕಿನ ಝಂಡದಕೇರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಹನುಮಂತರಾಯ ಅವರನ್ನ ಅಮಾನತು ಮಾಡಲಾಗಿದೆ.
ಯಾದಗಿರಿ ಜಿಲ್ಲಾ ಪಂಚಾಯತಿ ಸಿಇಒ ಗರೀಮಾ ಪನ್ವಾರ್ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಮೇಲ್ವಿಚಾರಕರು ಕ್ರಮಕೈಗೊಂಡಿರಲಿಲ್ಲ. ಮುಖ್ಯ ಅಧೀಕ್ಷಕರ ಗಮನಕ್ಕೂ ತರದೆ ಪರೀಕ್ಷಾ ಮೇಲ್ವಿಚಾರಕರು ನಿರ್ಲಕ್ಷಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಇಬ್ಬರು ಪರೀಕ್ಷಾ ಮೇಲ್ವಿಚಾರಕರ ಅಮಾನತು ಮಾಡಲಾಗಿದೆ.
ಕಾಪಿ ಹೊಡೆದರೆ ಏನು ತಪ್ಪು?
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಏಕೆ? ಎಂದು ಮಾಜಿ ಶಿಕ್ಷಣ ಸಚಿವ ಎನ್ ಮಹೇಶ್ ಪ್ರಶ್ನೆ ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಏಕೆ? ವಿದ್ಯಾರ್ಥಿಗಳು ಏನು ಕಳ್ಳರೇ? ಪರೀಕ್ಷೆ ಬರೆಯುವುದಕ್ಕೆ ಭಯ ಪಡಿಸುತ್ತಿದ್ದಾರೆ. ಅಲ್ಲದೇ ಕಷ್ಟ ಪಟ್ಟು ಓದಿ ಬಂದು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭಯದ ವಾತಾವರಣವಿದೆ. ಕಾಪಿ ಹೊಡೆದರೆ ಏನು ತಪ್ಪು? ಅದು ಮಹಾ ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.