ಬೆಂಗಳೂರು ಗ್ರಾಮಾಂತರ : ನಡುರಸ್ತೆಯಲ್ಲಿ ರೌಡಿ ಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಹೆಚ್ಚಿನ ವಿಚಾರಣೆ ಮುಂದುವರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಫೆ.25 ರಂದು ಬೆಳಗಿನ ಜಾವ ವಿಜಯ್ ಕುಮಾರ್ ಎಂಬ ರೌಡಿ ಶೀಟರ್ನ ಕೊಲೆಯಾಗಿರುವ ಕುರಿತು ದೂರು ಬಂದ ಹಿನ್ನೆಲೆ ತನಿಖೆ ಕೈಗೊಳ್ಳಲಾಯಿತು, ಈ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿದೆ ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಪೋಟ ಸಂಬಂಧ ಇಂದು ಸಿಎಂ ಸಭೆ
ಈ ಹಿಂದೆ ಮನೋಜ್ ಕುಮಾರ್ ಎಂಬಾತನನ್ನು ವಿಜಯ್ ಕುಮಾರ್ ಎಂಬುವವನು ಕೊಲೆ ಮಾಡಿ ಜೈಲುವಾಸ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ, ತನ್ನ ಅಣ್ಣನ ಕೊಲೆಗೆ ಕಾರಣನಾದ ಎಂಬ ಕಾರಣಕ್ಕೆ ಮನೋಜ್ ಸಹೋದರ ಅರ್ಜುನ್ ಮತ್ತು ಸ್ನೇಹಿತರ ತಂಡ ಸೇರಿ ಫೆ.25 ರಂದು ಬೆಳಗಿನ ಜಾವ ವಿಜಯ್ ಕುಮಾರ್ ನನ್ನು ತನ್ನ ಮನೆಯಿಂದ ಹೊರಗೆ ಕರೆದು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆ ದ್ವೇಷವೇ ಕೊಲೆಗೆ ಕಾರಣ ಎಂಬುದು ದೃಢಪಟ್ಟಿದೆ ಎಂದರು.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ A1 ಆರೋಪಿ ಅರ್ಜಿನ್ ಸೇರಿದಂತೆ ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.