ಬೆಂಗಳೂರು : ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇದೆ. ಬಿಜೆಪಿ ಗೆಲ್ಲಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೊಕ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪರ್ಧೆ ಆಗಬೇಕು ಎಂಬ ದೃಷ್ಟಿಯಿಂದ ಸ್ಪರ್ಧೆ ಆಗಿದೆ. ಇದು ಬಿಜೆಪಿ, ಜೆಡಿಎಸ್ ಸೋಲು ಅಂತ ಅಲ್ಲ ಎಂದು ತಿಳಿಸಿದರು.
ಪಕ್ಷ ಬಿಡುವ ವಿಚಾರದ ಬಗ್ಗೆ ಮಾತನಾಡಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿ ಬಂದರು. ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು. ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡ್ತೀವಿ ಎಂದು ಹೇಳಿದರು.
ಶಾಸಕ ಎಸ್.ಟಿ. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದ್ದರು. ಪಕ್ಷಕ್ಕೆ ದ್ರೋಹ ಬಗೆಯಲ್ಲ ಎಂದು ಹೇಳಿದ್ದರು. ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನು ಖಂಡಿತ ಕ್ಷಮಿಸುವುದಿಲ್ಲ ಎಂದು ಆರ್. ಅಶೋಕ್ ಕಿಡಿಕಾರಿದರು.
ಇನ್ನೂ ಕೆಲವರು ಬಿಜೆಪಿ ಸಖ್ಯ ಬಿಡ್ತಾರೆ
ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ನಾವು ಬಿಜೆಪಿಗೆ ಹೆದರಿಕೊಂಡು ಹೋಟೆಲ್ ಹೋಗಿರಲಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಹೋಗಿದ್ದೆವು. ಎಸ್.ಟಿ ಸೋಮಶೇಖರ್ ಬಿಜೆಪಿ ಸಖ್ಯ ಬಿಟ್ಟು ಬಹಳ ದಿನ ಆಗಿದೆ. ಇನ್ನೂ ಕೆಲವರು ಬಿಜೆಪಿ ಸಖ್ಯ ಬಿಡ್ತಾರೆ. ಕುಪೇಂದ್ರ ರೆಡ್ಡಿ ನನ್ನ ಹಳೆಯ ಸ್ನೇಹಿತರು. ಸ್ನೇಹಿತನೇ ಬೇರೆ ಪಾರ್ಟಿನೇ ಬೇರೆ ಎಂದು ಕುಟುಕಿದರು.