ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಒಂದು ದಿನ ವಿಸ್ತರಣೆ ಮಾಡಲಾಗಿದೆ. ನಟ ದರ್ಶನ್ ಹಾಗೂ ಇತರೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.
24ನೇ ಎಸಿಎಂಎಂ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ರಾಜ್ಯದ ವಿವಿಧ ಜೈಲುಗಳಲ್ಲಿರುವ ಆರೋಪಿಗಳು 24 ನೇ ಎಸಿಎಂಎಂ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾದರು. ನ್ಯಾಯಾಧೀಶರು ಒಬ್ಬೊಬ್ಬರ ಹೆಸರನ್ನು ಕರೆದಿದ್ದು, ಎಲ್ಲಾ ಆರೋಪಿಗಳು ಪ್ರತ್ಯೇಕವಾಗಿ ಹಾಜರಾದರು. ನಟ ದರ್ಶನ್ ಪರ ವಕೀಲ ಶಿವಕುಮಾರ್ ಹಾಜರಾಗಿದ್ದರು. ಈ ವೇಳೆ ಕಮಿಟಲ್ ಆದೇಶಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಟೆಕ್ನಿಕಲ್ ಎವಿಡೆನ್ಸ್ಗಳನ್ನು ಆರೋಪಿಗಳಿಗೆ ಕೊಟ್ಟ ನಂತರ ಕಮಿಟಲ್ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ವೇಳೆ ಕೊಲೆ ಪ್ರಕರಣವನ್ನು ಸೆಷನ್ಸ್ ಕೋರ್ಟ್ಗೆ ವರ್ಗಾವಣೆ ಮಾಡುವುದಾಗಿ ನ್ಯಾಯಾಧೀಶರು ಹೇಳಿದರು. ಆಗ ಡಿಜಿಟಲ್ ಎವಿಡೆನ್ಸ್ ನೀಡಿದ ಬಳಿಕ ಸೆಷನ್ಸ್ ಕೋರ್ಟ್ಗೆ ವರ್ಗಾವಣೆ ಮಾಡುವಂತೆ ಆರೋಪಿ ಪರ ವಕೀಲ ಮನವಿ ಮಾಡಿದರು. ಈ ವೇಳೆ ಡಿಜಿಟಲ್ ಎವಿಡೆನ್ಸ್ ನೀಡಲು ಒಂದು ವಾರ ಸಮಯ ಬೇಕಾಗುತ್ತೆ ಎಂದು ಎಸ್ಪಿಪಿ ವಾದಿಸಿದರು.
ನಾಳೆ ಡಿಜಿಟಲ್ ಸಾಕ್ಷ್ಯಗಳನ್ನು ನೀಡಲು ಎಸ್ಪಿಪಿಗೆ ನ್ಯಾಯಾಧೀಶರು ಸೂಚನೆ ನೀಡಿದರು. ನಾಳೆ ಮತ್ತೆ ಎಲ್ಲಾ ಆರೋಪಿಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ.