ಮೈಸೂರು: ಸಿಎಂ ರಾಜೀನಾಮೆ ಕೊಡಲ್ಲ.. ಕೊಡಲ್ಲ. ಸಿದ್ದರಾಮಯ್ಯರ ಜೊತೆ ಈ ಬಂಡೆ ಇದ್ದೇ ಇರುತ್ತೆ. ನಿಮ್ಮ ಕೈಯಲ್ಲಿ ಏನೂ ಮಾಡಿಕೊಳ್ಳಲು ಆಗಲ್ಲ ಎಂದು ದೋಸ್ತಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಮೈಸೂರಲ್ಲಿ ಬಿಜೆಪಿ ಪಕ್ಷದ ಪಾದಯಾತ್ರೆಗೆ ವಿರುದ್ದವಾಗಿ ನಡೆಸುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಎರಡು ಜನ್ಮ ಎತ್ತಿ ಬಂದ್ರೂ ಏನೂ ಮಾಡೋದಕ್ಕೆ ಆಗಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ಕಾಂಗ್ರೆಸ್ ಸರ್ಕಾರವನ್ನ ಮುಟ್ಟೋದಕ್ಕೆ ನಿಮಗೆ ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಮೇಕೆದಾಟು ಯೋಜನೆ: ರಾಜ್ಯ ಹಾಗೂ ತಮಿಳುನಾಡು ನಡುವೆ ಸಭೆ ನಡೆಸುವಂತೆ ಮನವಿ ಮಾಡಿದ್ದೇನೆ: DKS
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದೀರಿ, ಮುಡಾದಲ್ಲಿ ಏನು ಹಗರಣ ಆಗಿದೆ ಹೇಳಿ? ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಅವರ ಅಣ್ಣ 3 ಎಕರೆ ಜಮೀನು ಕೊಟ್ಟಿದ್ದಾರೆ. ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡರು. ಸರ್ಕಾರದವರು ಆ ಜಮೀನು ಅತಿಕ್ರಮಣ ಮಾಡಿಕೊಂಡಿಲ್ಲ. ಸರ್ಕಾರಕ್ಕೆ ಜಮೀನನ್ನು ವಾಪಸ್ ಕೊಡಿ ಅಂತ ಕೇಳಿಕೊಂಡಿದ್ದಾರೆ. ಒತ್ತುವರಿ ಬದಲಿಗೆ ಸರ್ಕಾರದವರು 14 ಸೈಟ್ ಕೊಟ್ಟಿದ್ದಾರೆ. ಸರ್ಕಾರದವರು 50:50 ಅನುಪಾತದಲ್ಲಿ ಸೈಟ್ ಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದರಲ್ಲಿ ಸಿದ್ದರಾಮಯ್ಯ ಹೇಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸೈಟ್ ನೀಡಿರುವುದು ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ಆಕ್ರೋಶ ಹೊರಹಾಕಿದರು.