ರಾಮನಗರ: ಬಿಜೆಪಿ-ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ, ಇದು ಪಾಪ ವಿಮೋಚನಾ ಪಾದಯಾತ್ರೆ. ಅವರ ಎಲ್ಲಾ ಪಾಪ ವಿಮೋಚನೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ, ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರ ಪಾಪಗಳನ್ನ ಜನರಿಗೆ ತಿಳಿಸಲು ಪಾದಯಾತ್ರೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ನವರದ್ದು ಅವಕಾಶವಾದಿ ಪಾದಯಾತ್ರೆ: M.B.ಪಾಟೀಲ್
ಈ ಭಾಗದಲ್ಲಿ ಹೆಚ್ಡಿಕೆ ಆಯ್ಕೆ ಆಗಿ, ಇಲ್ಲಿ 6 ವರ್ಷ ಅಧಿಕಾರ ನಡೆಸಿದ್ದೀರಿ. ನೀವು ರೈತನ ಮಗ ಪಾಪ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ. ನಾನು ಈ ಕ್ಷೇತ್ರದಲ್ಲಿ ಬಂದು ಜನಸಂದರ್ಶನ ಸಭೆ ಮಾಡಿದ್ದೆ. 22 ಸಾವಿರ ಜನ ಬಂದು ಅರ್ಜಿ ಕೊಟ್ಟಿದ್ದಾರೆ. ಇಷ್ಟು ದಿನ ನೀವು ಇಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.