ಭೀಮನ ಅಮವಾಸ್ಯೆ ಬಂದಾಗಲೆಲ್ಲಾ ಕನ್ನಡಿಗರಿಗೆ ಆ ಕಹಿನೆನಪು ಬಿಟ್ಟೂ ಬಿಡದೇ ಕಾಡುತ್ತೆ. ಇಂದಿಗೆ ಬರೊಬ್ಬರಿ 24 ವರ್ಷಗಳ ಹಿಂದೆ ನಟಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ.ರಾಜ್ಕುಮಾರ್ ಅಪಹರಣ ನಡೆದಿತ್ತು. ವೀರಪ್ಪನ್ನಿಂದ ಅಪಹರಣಕ್ಕೀಡಾಗಿದ್ದ ಕನ್ನಡಿಗರ ಹೃದಯ ಸಿಂಹಾಸನದ ರಾಜಕುಮಾರ, ಬರೊಬ್ಬರಿ 108 ದಿನಗಳ ಕಾಲ ವನವಾಸ ಅನುಭವಿಸಿದ್ದ. 24 ವರ್ಷಗಳ ಹಿಂದೆ ಏನೆಲ್ಲಾ ನಡೆದಿತ್ತು ಅನ್ನೋದ್ರ ಆ ಫ್ಲ್ಯಾಶ್ ಬ್ಯಾಕ್ ಕಹಾನಿ ಇಲ್ಲಿದೆ ನೋಡಿ.
ಯೆಸ್, ಭೀಮನ ಅಮವಾಸ್ಯೆ ಬಂದ್ರೆ ಕನ್ನಡ ಚಿತ್ರರಂಗದವರಿಗೆ ಆ ಕರಾಳ ನೆನಪು ಬಿಟ್ಟೂ ಬಿಡದೇ ಕಾಡುತ್ತೆ. ಬರೊಬ್ಬರಿ 24 ವರ್ಷಗಳ ಹಿಂದೆ ಇದೇ ರೀತಿ ಭೀಮನ ಅಮವಾಸ್ಯೆಯಂದೇ ಡಾ.ರಾಜ್ಕುಮಾರ್ ಅವರ ಅಪಹರಣ ನಡೆದಿತ್ತು. ತಮ್ಮ ಹುಟ್ಟೂರು ಗಾಜನೂರಿಗೆ ತೆರಳಿದ್ದ ಅಣ್ಣಾವ್ರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ.
ಭೀಮನ ಅಮವಾಸ್ಯೆಯ ಆ ಕರಾಳ ರಾತ್ರಿ ರಾಜ್ ಅಪಹರಣ ನಡೆದಿದ್ದು, ಮಾರನೇ ದಿನ ಬೆಳಗಾಗುವಷ್ಟರಲ್ಲಿ ಕನ್ನಡ ನಾಡಿನಾದ್ಯಂತ ಸುದ್ದಿ ಪ್ರಸಾರವಾಗಿತ್ತು. ಜನರು ಬೀದಿಗೆ ಇಳಿದಿದ್ರು. ಇಡೀ ಕರುನಾಡೇ ಬಂದ್ ಆಗಿತ್ತು. ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳು, ದೇಶದ ಗೃಹಮಂತ್ರಿಗಳೊಡನೆ ಚರ್ಚಿಸಿ ಅಣ್ಣಾವ್ರನ್ನ ಬಿಡುಗಡೆ ಮಾಡುವ ಕಾರ್ಯಾಚರಣೆ ಆರಂಭಿಸಿದ್ರು.
ಇದನ್ನೂ ಓದಿ: ಕೇರಳದಲ್ಲಿ ಸಾವಿನ ಸಂಖ್ಯೆ 361ಕ್ಕೆ ಏರಿಕೆ: ಭೂಕುಸಿತ ಪ್ರದೇಶದಲ್ಲಿ ಕಳ್ಳರ ಹಾವಳಿ
ಆದ್ರೆ ರಾಜ್ಕುಮಾರ್ ಬಿಡುಗಡೆ ಅಷ್ಟು ಸುಲಭವಾಗಿ ಆಗ್ಲಿಲ್ಲ. ಕನ್ನಡಿಗರ ಹೃದಯ ಸಿಂಹಾಸನದ ರಾಜಕುಮಾರ ಬರೊಬ್ಬರಿ 108 ದಿನಗಳ ಕಾಲ ವನವಾಸ ಅನುಭವಿಸಬೇಕಾಯ್ತು. ಅಣ್ಣಾವ್ರ ಬಿಡುಗಡೆಗೆ ಹಲವು ಶರತ್ತುಗಳನ್ನ ಇಟ್ಟಿದ್ದ ವೀರಪ್ಪನ್ ಸರ್ಕಾರದ ಜೊತೆಗೆ ಚೌಕಾಸಿಗೆ ಇಳಿದಿದ್ದ.
ಡಾ.ರಾಜ್ಕುಮಾರ್ ಕುಟುಂಬದ ಜೊತೆಗೆ ಸರ್ಕಾರ ನಿರಂತರ ಸಂಪರ್ಕದಲ್ಲಿತ್ತು. ಅಂಬರೀಷ್, ವಿಷ್ಣುವರ್ಧನ್ ಮುಂಚೂಣಿಯಲ್ಲಿ ನಿಂತು, ರಾಜ್ ಬಿಡುಗಡೆಗೆ ಪ್ರಯತ್ನ ಮಾಡ್ತಾ ಇದ್ರು. ತಮಿಳುನಾಡಿನಲ್ಲಿ ರಜನಿಕಾಂತ್ ಅಣ್ಣಾವ್ರ ಬಿಡುಗಡೆಗಾಗಿ ನಾನಾ ಪ್ರಯತ್ನಗಳನ್ನ ಮಾಡ್ತಾ ಇದ್ರು.
ಇತ್ತ ಚಿತ್ರರಂಗ ಅಣ್ಣಾವ್ರ ಬಿಡುಗಡೆಯ ವರೆಗೂ ಕಾರ್ಯನಿರ್ವಹಿಸೋದನ್ನೇ ನಿಲ್ಲಿಸಿತ್ತು. ಚಿತ್ರೀಕರಣ ಬಂದ್ ಆಗಿತ್ತು. ಚಿತ್ರಮಂದಿರಗಳ ಬಾಗಿಲು ಹಾಕಲಾಗಿತ್ತು. ಸಿನಿರಂಗದ ಕಾರ್ಮಿಕರಿಗೆ ಫುಡ್ ಕಿಟ್ಗಳ ವಿತರಣೆ ನಡೀತಾ ಇತ್ತು.
ಕೊನೆಗೂ 108 ದಿನಗಳ ಪ್ರಯತ್ನದ ಬಳಿಕ ವೀರಪ್ಪನ ಡಾ.ರಾಜ್ಕುಮಾರ್ರನ್ನ ಬಿಡುಗಡೆ ಮಾಡಿದ. ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಅಣ್ಣಾವ್ರನ್ನ ಬೆಂಗಳೂರಿಗೆ ಕರೆತರಲಾಯ್ತು. ಅಭಿಮಾನಿಗಳು ಖುಷಿಯಿಂದ ಕುಣಿದಾಡಿದ್ರು.
ಇದನ್ನೂ ಓದಿ: ಧ್ರುವ ಸರ್ಜಾ ಎದುರು ಕೇ‘ಡಿ’ ಅಭಿಮಾನಿಗಳ ಹೈಡ್ರಾಮಾ
ಅಣ್ಣಾವ್ರ ಬಿಡುಗಡೆಯ ನಂತರ ವೀರಪ್ಪನ್ ವಿರುದ್ದದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಲಾಯ್ತು. 2004ರಲ್ಲಿ ಎಸ್ಟಿಎಫ್ ಪಡೆ ವೀರಪ್ಪನ್ ಅನ್ನೋ ನರರಾಕ್ಷಸನನ್ನ ಹೊಡೆದುಹಾಕ್ತು. ದಶಕಗಳ ಕಾಲ ದೇಶದ ಭದ್ರತೆಗೆ ಸವಾಲೊಡ್ಡಿದ್ದ ಕಾಡುಗಳ್ಳ ಕೊನೆಗೂ ಹತನಾದ.
ಡಾ.ರಾಜ್ ಕುಮಾರ್ ಅಪಹರಣ, ವೀರಪ್ಪನ ಹತ್ಯೆ ಬಗ್ಗೆ ಅನೇಕ ಡಾಕ್ಯುಮೆಂಟರಿಗಳು, ಸಿನಿಮಾಗಳು ತೆರೆ ಮೇಲೆ ಮೂಡಿಬಂದಿವೆ. ಆಗ ಏನೆಲ್ಲಾ ನಡೆದಿತ್ತು ಅನ್ನೋ ಕಥೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿವೆ.
ಕಾಡಿನಿಂದ ಬಂದ ಬಳಿಕ ಡಾ.ರಾಜ್ಕುಮಾರ್ ಮೊದಲಿನಂತೆ ಇರಲಿಲ್ಲ. ಅವರ ಮನಸ್ಸಿನ ಮೇಲೆ ತೀವ್ರ ಆಘಾತ ಆಗಿತ್ತು. ವನವಾಸ ಅನುಭವಿಸಿ ಬಂದ ದೇಹವೂ ಅನಾರೋಗ್ಯಕ್ಕೆ ಈಡಾಗಿತ್ತು. ಮುಂದೆ 2006ರಲ್ಲಿ ಅಣ್ಣಾವ್ರು ಹೃದಾಯಾಘಾತದಿಂದ ಪ್ರಾಣವನ್ನ ತ್ಯಜಿಸಿದ್ರು.
ಎಲ್ಲೋ ಒಂದು ಕಡೆ ಈ ಅಪಹರಣ ನಡೆಯದೇ ಹೋಗಿದ್ರೆ ಅಣ್ಣಾವ್ರು ಮತ್ತಷ್ಟು ವರ್ಷ ಆರೋಗ್ಯವಾಗಿ ಬದುಕ್ತಾ ಇದ್ರು ಅಂತ ಹೇಳಲಾಗುತ್ತೆ. ಸೋ ಡಾ.ರಾಜ್ ನಮ್ಮಿಂದ ಬಹುಬೇಗ ದೂರವಾಗೋದಕ್ಕೆ ಈ ಅಪಕರಣವೇ ಪರೋಕ್ಷ ಕಾರಣ. ಅಂತೆಯೇ ಭೀಮನ ಅಮವಾಸ್ಯೆ ಬಂದಾಗಲೆಲ್ಲಾ ಈ ಕಹಿಘಟನೆ ಬೇಡ ಅಂದ್ರೂ ಕನ್ನಡಿಗರಿಗೆ ನೆನಪಾಗುತ್ತೆ. ಕರಾಳ ನೆನಪಾಗಿ ಕಾಡುತ್ತೆ.
ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.