ಬೆಂಗಳೂರು: ಮುಡಾ ನಿವೇಶನ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕೆಲವೇಕ್ಷಣಗಳಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ಆರಂಭವಾಗಲಿದೆ. ಕೆಂಗೇರಿಯ ನೈಸ್ ರಸ್ತೆಯ ಕೆಂಪಮ್ಮ ದೇವಸ್ಥಾನದ ಬಳಿ ಮಾಜಿ ಸಿಎಂ B.S.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ H.D.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಪಾದಯಾತ್ರೆ ಆರಂಭದ ಸ್ಥಳದಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗುವ ಸಂಭವವಿದೆ.
ಇದನ್ನೂ ಓದಿ: ಭ್ರಷ್ಟಾಚಾರ ಪಿತಾಮಹ ಯಾರು? ವಿಜಯೇಂದ್ರ ಗಂಡಸಾಗಿದ್ರೆ ಹೇಳಲಿ: ಡಿಕೆ ಶಿವಕುಮಾರ್
ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣದ ಕಡೆಗೆ ಬೆಳಿಗ್ಗೆ ತೆರಳುವವರು ಹಾಗೂ ಬೆಂಗಳೂರು ನಗರಕ್ಕೆ ವಾಪಸ್ ಬರುವ ಪ್ರಯಾಣಿಕರು ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ. ತುರ್ತು ಕೆಲಸಕ್ಕೆ ತೆರಳುವವರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ಇನ್ನು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸ್ ವಿಭಾಗದ ಮೂವರು ಇನ್ಸ್ಪೆಕ್ಟರ್ ಹಾಗೂ 50 ಸಿಬ್ಬಂದಿ ನಿಯೋಜಿಸಲಾಗಿದೆ.
ಮೈಸೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭ:
ಮೈಸೂರು ಅಭಿವೃದ್ಧಿ ಪ್ರಾಧಿಕಾರನೀವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದೆ.
ಮೊದಲ ದಿನವಾದ ಇಂದು ಕೆಂಗೇರಿ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ನಾಳೆ ಬಿಡದಿಯಿಂದ ಆರಂಭವಾಗಿ 22 ಕಿಲೋ ಮೀಟರ್ ಪಾದಯಾತ್ರೆ ಸಾಗಲಿದೆ. 3ನೇ ದಿನ ಕೆಂಗಲ್ನಿಂದ ಆರಂಭವಾಗಿ 20 ಕಿಲೋ ಮೀಟರ್ ನಡೆಯಲಿದ್ದಾರೆ. 4ನೇ ದಿನ ನಿಡಗಟ್ಟದಿಂದ ಆರಂಭವಾಗಿ 20 ಕಿಲೋ ಮೀಟರ್ ನಡೆಯಲಿದ್ದಾರೆ. ಬಳಿಕ 5ನೇ ದಿನ ಮಂಡ್ಯದಿಂದ 16 KM, 6ನೇ ದಿನ ತೂಬಿನಕರೆಯಿಂದ ಕಾಲ್ನಡಿಗೆ ಸಾಗಲಿದೆ. 7ನೇ ದಿನ ಶ್ರೀರಂಗಪಟ್ಟಣದಿಂದ ಪಾದಯಾತ್ರೆ ನಡೆಯಲಿದೆ. 8ನೇ ದಿನದಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.