ವಿಜಯ್ ಭಾರದ್ವಾಜ್! ಈ ಹೆಸರು ಕೇಳಿದಾಗ ಕಣ್ಮುಂದೆ ಬರುವುದು 90ರ ದಶಕ ಮುಗಿಯೋ ಕೊನೆ ವರ್ಷದ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ರಣಜಿ ಟ್ರೋಫಿ ಪಂದ್ಯಗಳಲ್ಲಿ ಅವರು ಬಾರಿಸುತ್ತಿದ್ದ ಶತಕಗಳು ಹಾಗೂ ಫೋಟೋಗಳು. ಈ ಟೂರ್ನಿಯಲ್ಲಿ ವಿಜಯ್ ಭಾರದ್ವಾಜ್ ಅವರ 90ರ ದಶಕದಲ್ಲಿ ಧೂಳೆಬ್ಬಿಸಿದ್ದ ಕರ್ನಾಟಕದ ಕ್ರಿಕೆಟ್ ಹೀರೋ ಆಗಿದ್ದರು.
ಇವರ ಅಡ್ಡ ಹೆಸರು ಪಿಂಗ ಅಂತ! 90ರ ದಶಕದಲ್ಲಿ ಕರ್ನಾಟಕದ 3 ರಣಜಿ ವಿಜಯಗಳ ವಿಜಯ ಶಿಲ್ಪಿಗಳಲ್ಲೊಬ್ಬರು ವಿಜಯ್ ಭಾರದ್ವಾಜ್. ಆ ಸಮಯದಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಅವರ ಹೆಸರು ದೊಡ್ಡದಾಗಿ ಸದ್ದು ಮಾಡಲು ಕಾರಣಗಳಿದ್ದವು. ಆಡಿದ ಮೂರು ರಣಜಿ ಫೈನಲ್ಗಲ್ಲಿ 2 ಶತಕ, 2 ಅರ್ಧ ಶತಕಗಳನ್ನು ಬಾರಿಸಿದ್ದ ಔಟ್ ಆ್ಯಂಡ್ ಔಟ್ ಮ್ಯಾಚ್ ವಿನ್ನರ್ ಆಗಿದ್ದರು.
1996ರ ರಣಜಿ ಫೈನಲ್ನಲ್ಲಿ 146 ರನ್ ಗಳಿಸಿದ್ದರು. 1998ರ ರಣಜಿ ಫೈನಲ್ನಲ್ಲಿ 122 ರನ್, 1999ರ ರಣಜಿ ಫೈನಲ್ನಲ್ಲಿ 86 ಮತ್ತು 75 ರನ್ ಗಳಿಸಿದಲ್ಲದೇ 7 ವಿಕೆಟ್ ಪಡೆದಿದ್ದರು. 1998-99ರ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿಜಯ್ ಭಾರದ್ವಾಜ್ 1260 ರನ್ಗಳನ್ನು ಗಳಿಸಿದ್ದರು. ಕರ್ನಾಟಕದ ಮಟ್ಚಿಗೆ ಈ ಸ್ಕೋರ್ ಇವತ್ತಿಗೂ ದಾಖಲೆಯಾಗಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಗೆಳಯನೊಂದಿಗೆ ನೈಟ್ ಔಟಿಂಗ್ ಹೋಗಿದ್ದ ಈಜುಗಾರ್ತಿ: ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರ ಹಾಕಿದ ಮುಖ್ಯಸ್ಥರು
ವಿಜಯ್ ಭಾರದ್ವಾಜ್ ಅವರು 1999ರ ರಣಜಿ ಫೈನಲ್ನಲ್ಲಿ ಅವರೊಬ್ಬ ಸ್ಪಿನ್ ಮಾಂತ್ರಿಕನಾಗಿ ಎದುರಳಿ ವಿರುದ್ಧ ಬೌಲಿಂಗ್ ಮಾಡುತ್ತಿದ್ದ ಆ ಕಾಲಘಟ್ಟದ ಕ್ರಿಕೆಟ್ ಪ್ರೇಮಿಗಳ್ಯಾರು ಮರೆಯುವಂತಿಲ್ಲ. ರಣಜಿ ಫೈನಲ್ಗಳಲ್ಲಿ ಅತ್ಯಂತ ರೋಚಕ 1999 ಮತ್ತು 2010ರ ಫೈನಲ್ಸ್. ಅದರಲ್ಲೂ 1999ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವಿದೆಯಲ್ಲ, ಕ್ರಿಕೆಟ್ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿತ್ತು.
ಫೈನಲ್ ಪಂದ್ಯದಲ್ಲಿ 75 ರನ್ಗಳ ಇನ್ನಿಂಗ್ಸ್ ಹಿನ್ನಡೆಗೊಳಗಾಗಿದ್ದ ಕರ್ನಾಟಕ 2ನೇ ಇನ್ನಿಂಗ್ಸ್ನಲ್ಲಿ ಕೌಂಟರ್ ಅಟ್ಯಾಕ್ಗೆ ಇಳಿದು ಬಿಟ್ಟಿತ್ತು. ಕರ್ನಾಟಕದ ಗೆಲುವಿಗೆ ಮುನ್ನುಡಿ ಬರೆದದ್ದು ಆರಂಭಿಕ ಬ್ಯಾಟ್ಸ್ಮನ್ ಜೆ.ಅರುಣ್ ಕುಮಾರ್ ಅವರು ಅಮೋಘ 147 ರನ್ಗಳು ಬಾರಿಸಿದರು. ರಣಜಿ ಟ್ರೋಫಿಗೆ ಮುತ್ತಿಡಲು ಕರ್ನಾಟಕ ಒಂದೇ ಒಂದು ವಿಕ್ಟರಿ ಮಾತ್ರ ಇತ್ತು.
ಮಧ್ಯಪ್ರದೇಶಕ್ಕೆ ಕೊನೆ ದಿನ 90 ಓವರ್ಗಳಲ್ಲಿ 247 ರನ್ ಟಾರ್ಗೆಟ್ ಇತ್ತು. ಗೆಲ್ಲುವುದಕ್ಕೆ ಮನಸ್ಸು ಮಾಡಿದ್ದರೆ ಟ್ರೋಪಿ ಎತ್ತುವುದು ಕಷ್ಟದ ವಿಷಯವಾಗಿರಲಿಲ್ಲ ಆದರೆ ಮಧ್ಯಪ್ರದೇಶ ಆಟಗಾರರು ಗೆಲುವಿನ ಬದಲು ಡ್ರಾ ಮಾಡಿಕೊಳ್ಳಲು ನಿರ್ಧರಿಸಿ ಬಿಟ್ಟಿದ್ದರು. ಮಧ್ಯಪ್ರದೇಶದವರ ಗೇಮ್ ಪ್ಲಾನ್ಗೆ ತಕ್ಕಂತೆ ಪಂದ್ಯ ಸ್ಪಷ್ಟವಾಗಿ ಡ್ರಾ ದತ್ತ ಸಾಗುತ್ತಿದ್ದ ಸಮಯ. 66 ಓವರ್, 130/4. ಮುಂದಿನ 24 ಓವರ್ಗಳನ್ನು ನಿಭಾಯಿಸಿದರೆ ರಣಜಿ ಟ್ರೋಫಿ ಮಧ್ಯಪ್ರದೇಶದ್ದು. 200ಕ್ಕೂ ಹೆಚ್ಚು ಎಸೆತಗಳನ್ನೆದುರಿಸಿದ್ದ ಅಬ್ಬಾಸ್ ಅಲಿ ನೆಲ ಕಚ್ಚಿ ಆಡುತ್ತಿದ್ದರು.
ಇದನ್ನೂ ಓದಿ: ಕೊಹ್ಲಿಯಂತ ದಿಗ್ಗಜ ಆಟಗಾರ ಮನೀಶ್ ಪಾಂಡೆಗೆ ಇದೇ ಕೊನೆಯ ಪ್ರಯಾಣವಾದರೂ ಅಚ್ಚರಿಯಲ್ಲ
ಆ ಸಮಯದಲ್ಲಿ ತಂಡ ನಾಯಕ ಸುನೀಲ್ ಜೋಶಿ ಚೆಂಡನ್ನು ವಿಜಯ್ ಭಾರದ್ವಾಜ್ ಕೈಗೆ ನೀಡುತ್ತಾರೆ. ಅದಾಗಲೇ ದೇವೇಂದ್ರ ಬುಂದೇಲಾ ವಿಕೆಟ್ ಪಡೆದಿದ್ದ ವಿಜಯ್ ಭಾರದ್ವಾಜ್ ಅವರು ಪೆವಿಲಿಯನ್ ತುದಿಯಿಂದ ದಾಳಿಗಿಳಿಯುತ್ತಾರೆ ಅಷ್ಟೇ. ಮಧ್ಯಪ್ರದೇಶದ ಕೆಳಕ್ರಮಾಂಕದ ಆಟಗಾರರು ವಿಜಯ್ ಭಾರದ್ವಾಜ್ ಅವರ ಆಫ್ ಸ್ಪಿನ್ ದಾಳಿಗೆ ತರಗೆಲೆಗಳಂತೆ ಉದುರಿ ಹೋಗಿದ್ದರು. 4 ವಿಕೆಟ್ಗೆ 130 ರನ್ ಗಳಿಸಿದ್ದ ಮಧ್ಯಪ್ರದೇಶ 150ಕ್ಕೆ ಆಲೌಟ್ ಆಗಿತ್ತು. ನಂಬಲಸಾಧ್ಯ ರೀತಿಯಲ್ಲಿ 96 ರನ್ಗಳಿಂದ ಪಂದ್ಯ ಗೆದ್ದ ಕರ್ನಾಟಕ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಬಿಟ್ಟಿತ್ತು. ಅಂದ ಹಾಗೆ ಆ ಇನ್ನಿಂಗ್ಸ್ನಲ್ಲಿ ವಿಜಯ್ ಭಾರದ್ವಾಜ್ ಅವರ ಬೌಲಿಂಗ್ ವಿಭಾಗದಲ್ಲಿ ಪ್ರದರ್ಶನ 6/24.
ಕರ್ನಾಟಕ ಕ್ರಿಕೆಟ್ ಕಂಡ ಶ್ರೇಷ್ಠ ರಣಜಿ ಕ್ರಿಕೆಟಿಗರಲ್ಲಿ ವಿಜಯ್ ಭಾರದ್ವಾಜ್ ಅವರು ಕೂಡ ಒಬ್ಬರು. 90ರ ದಶಕದಲ್ಲಿ 3 ರಣಜಿ ಟ್ರೋಫಿ, 2 ಇರಾನಿ ಕಪ್ (1996, 1998) ಗೆದ್ದ ಕರ್ನಾಟಕ ತಂಡ ಬೆನ್ನೆಲುಬಾಗಿದ್ದವರು ವಿಜಯ್ ಭಾರದ್ವಾಜ್. ಭಾರತ ಪರ ಆಡಿದ್ದು ಕೆಲವೇ ಕೆಲ ಅಂತರಾಷ್ಟ್ರೀಯ ಪಂದ್ಯಗಳಾದರೂ ಆಡಿದ ಮೊದಲ ಸರಣಿಯಲ್ಲೇ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಗೆ ಭಾಜನರಾಗಿದ್ದರು.