ಕೇರಳ: ವಯನಾಡಿನಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸುವ ಸಲುವಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಕೇರಳದ ಕ್ಯಾಲಿಕಟ್ಗೆ ತಲುಪಿದ್ದಾರೆ.
ವಯನಾಡಿನಲ್ಲಿ ಸಂಭವಿಸಿರುವ ಸರಣಿ ಭೂಕುಸಿತದ ಪರಿಣಾಮ ಕನಿಷ್ಠ 123 ಮಂದಿ ಮೃತಪಟ್ಟಿದ್ದಾರೆ. 128 ಜನರು ಗಾಯಗೊಂಡಿದ್ದು ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಈ ಸಂಬಂಧ ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಜಭವನ, ಬೋಸ್ ಅವರು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಕೇರಳ ಭೂಕುಸಿತ: 3,068 ಮಂದಿ ನಿರಾಶ್ರಿತರಿಗೆ ಆಶ್ರಯ, ಕನ್ನಡಿಗರ ರಕ್ಷಣೆಗೆ IAS ಅಧಿಕಾರಿಗಳ ನೇಮಕ
ವಯನಾಡ್ ಬೆಟ್ಟಗಳಲ್ಲಿ ಭೂಕುಸಿತ ಸಂಭವಿಸಿರುವ ಮೆಪ್ಪಾಡಿಗೆ ತೆರಳುವ ಸಲುವಾಗಿ ಬೋಸ್ ಅವರು ಕ್ಯಾಲಿಕಟ್ ವಿಮಾನ ನಿಲ್ದಾಣ ತಲುಪಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿರುವ ಕೇಂದ್ರ ಮತ್ತು ರಾಜ್ಯದ ಏಜೆನ್ಸಿಗಳ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೂ ನಿಕಟ ಸಂಪರ್ಕದಲ್ಲಿರುವ ಬೋಸ್ ಅವರು, ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಿಗೂ ಭೇಟಿ ನೀಡಲಿದ್ದಾರೆ. ಇಡೀ ದೇಶ ಸಂತ್ರಸ್ತರೊಂದಿಗಿದೆ ಎಂದೂ ಹೇಳಿದೆ.