ಬೆಂಗಳೂರು: ತಮ್ಮ 57ನೇ ವಯಸ್ಸಿನಲ್ಲಿ ನಟಿ ಅಪರ್ಣಾ ಕ್ಯಾನ್ಸರ್ ಕಾಯಿಲೆಯಿಂದ ಗುರುವಾರ ರಾತ್ರಿ ಬನಶಂಕರಿ ಎರಡನೇ ಹಂತದಲ್ಲಿರೋ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿವಾಸದ ಬಳಿ 12 ಗಂಟೆಯ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಪರ್ಣ ಅಗಲಿಕೆಗೆ ಕನ್ನಡ ಚಿತ್ರರಂಗ ಗಣ್ಯರು, ಕಿರುತೆರೆ ನಟ-ನಟಿಯರು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದು, ಅಂತಿಮ ದರ್ಶನ ಪಡೆದಿದ್ದಾರೆ. ಇದೇ ವೇಳೆ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅಪರ್ಣಾ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ್ದಾರೆ.
ಇದನ್ನೂ ಓದಿ: ನಿರೂಪಕಿ ಅಪರ್ಣಾ ವಸ್ತಾರೆ ಕ್ಯಾನ್ಸರ್ನಿಂದ ನಿಧನ!
ಅಪ್ಪು100ನೇ ದಿನದ ಸಂಭ್ರಮದಲ್ಲಿ ಭಾಗಿಯಾಗಿದ್ದ ಅಪರ್ಣಾ, ವಿನಯ್ ಜೊತೆಗೆ ಗ್ರಾಮಾಯಣ ಸಿನಿಮಾದಲ್ಲೂ ನಟಿಸಿದ್ದರು. ಅಪರ್ಣಾ ನಮ್ಮ ಕುಟುಂಬಕ್ಕೆ ಬಹಳ ಬೇಕಾದವರು. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಇನ್ಸ್ ಪೆಕ್ಟರ್ ನಿಮಾದಲ್ಲೂ ನಟಿಸಿದ್ದರು. ಅವರ ಜೊತೆಗೆ ನಮ್ಮ ಬಾಂಧವ್ಯ ಚೆನ್ನಾಗಿತ್ತು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.
ಇದೇ ವೇಳೆ, ಹಿರಿಯ ಕಲಾವಿದ ದತ್ತಾ ಹಾಗೂ ನಟ ಮಂಡ್ಯ ರಮೇಶ್ ಅವರು ಕೂಡ ಅಪರ್ಣಾ ಅಂತಿಮ ದರ್ಶನ ಪಡೆದರು. ಅಪರ್ಣಾ ಸಾವಿನ ಸುದ್ದಿ ಕೇಳಿ ಬೇಸರವಾಯ್ತು, ಸಾವಿನ ಮುನ್ಸೂಚನೆ ಗೊತ್ತಿದ್ದರು ನಗುತ್ತಾ ಇದ್ರು ಎಂದು ನಟ ದತ್ತಾ ಹೇಳಿದರು.
ಅಪರ್ಣಾ ನಿಧನದ ಸುದ್ದಿ ಕೇಳಿ ನಿಜಕ್ಕೂ ಶಾಕಿಂಗ್ ಆಗಿತ್ತು. ಅವರ ಆರೋಗ್ಯದ ಸಮಸ್ಯೆ ನಮಗೆ ಗೊತ್ತಿರಲಿಲ್ಲ. ಮೊದಲು ಅವರನ್ನ ನೋಡಿದ್ದು ದೂರದರ್ಶನದಲ್ಲಿ, ಶಾಲಾ ದಿನಗಳಿಂದಲೂ ಅವರ ನ್ಯೂಸ್ ನೋಡಿದ್ದೆ. ನಿರೂಪಕಿಯಾಗಿದ್ದ ಅಪರ್ಣಾ ಅವರನ್ನು ಸಾಕಷ್ಟು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೇನೆ. ಅವರ ಅಭಿಮಾನ ಪೂರ್ವಕ ನಗು, ಸ್ಪಷ್ಟ ಮಾತು ನಿಜಕ್ಕೂ ನಮಗೆ ಪ್ರೇರಣೆಯಾಗಿತ್ತು. ಆಕೆ ಇಲ್ಲದ ನೋವನ್ನ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಮಂಡ್ಯ ರಮೇಶ್ ಹೇಳಿದರು.