ಬೆಂಗಳೂರು: ಮಾಡಿದ ತಪ್ಪನ್ನು ತಿದ್ದಿಕೊಂಡು ಪರಿವರ್ತನೆಯಾದವರಿಗೆ ಕಾನೂನು ಮತ್ತೊಂದು ಅವಕಾಶ ಕಲ್ಪಿಸಿದೆ. ಯಾವುದೇ ಕಾರಣಕ್ಕು ನೀವು ಮತ್ತೊಂದು ತಪ್ಪನ್ನು ಮಾಡಬೇಡಿ. ನಿಮ್ಮ ಕುಟುಂಬದ ಜೊತೆ ಉಳಿದ ಜೀವನವನ್ನು ಸಾಗಿಸಬೇಕು. ನಿಮ್ಮ ಸನ್ನಡತೆಯ ಬಿಡುಗಡೆ ಬೇರೆಯವರಿಗು ಮಾದರಿಯಾಗಲಿ ಎಂದು ಗೃಹಸಚಿವ ಜಿ.ಪರಮೇಶ್ವರ್ ಅವರು ಕಿವಿಮಾತು ಹೇಳಿದರು.
ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ “ರಾಷ್ಟ್ರಪತಿಗಳ ಸುಧರಣಾ ಸೇವೆ ಪದಕ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಮತ್ತು ಸನ್ನಡತೆಯ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ” ಸಮಾರಂಭದಲ್ಲಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪದಕ ಪ್ರಧಾನ ಮಾಡಿದರು. ಸನ್ನಡತೆಯ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ ಹೊಂದಿದವರಿಗೆ ಸಚಿವರು ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಮಹಾನಿರ್ದೇಶಕರಾದ ಮಾಲಿನಿ ಕೃಷ್ಣಮೂರ್ತಿ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ ಆನಂದ್ ರೆಡ್ಡಿ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಉಪಸ್ಥಿತರಿದ್ದರು.