ಮೈಸೂರು: ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಶಾಸಕ ಜಿಟಿ ದೇವೇಗೌಡ, ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ವೀಕ್ ಆಗಿತ್ತು, ಅವಾಗ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದರು. ಸದ್ಯ ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಇದ್ದಾರೆ. ಸಿದ್ದರಾಮಯ್ಯ ಕೂಡ ಹೈಕಮಾಂಡ್ ಹೇಳಿದ್ರೆ ಅಂಥ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹೇಳಿಲ್ಲ, ಅವರ ಶಾಸಕರೂ ಕೂಡ ಹೇಳಿಲ್ಲ. ಒಕ್ಕಲಿಗ ಸ್ವಾಮೀಜಿಗಳು ಬಹಿರಂಗವಾಗಿ ಒಂದು ಮನವಿ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಮೇಲಿನ ಅಭಿಮಾನದಿಂದ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಕುರುಬ ಸಮುದಾಯದ ಸ್ವಾಮೀಜಿ ದೊಡ್ಡ ಘರ್ಜನೆ ಮಾಡಲಿಲ್ವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು: ಪರಂ
ಪವರ್ ಶೇರಿಂಗ್ ಬಗ್ಗೆ ಮಾಧ್ಯಮದವರೇ ಹೇಳಿದ್ದೀರಿ. ಅದರ ಆಧಾರದಲ್ಲಿ ಸಿದ್ದರಾಮಯ್ಯ ಆದ ಮೇಲೆ ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿದ್ದಾರೆ. ಇದು ದೊಡ್ಡ ಅಪರಾಧ ಅಲ್ಲ. ಸಿದ್ದರಾಮಯ್ಯ, ಹೈಕಮಾಂಡ್ ಮನಸ್ಸು ಮಾಡಿದರೆ ಎಷ್ಟು ವರ್ಷ ಎಂದು ಗೊತ್ತಿಲ್ಲ ಎಂದರು.
ಹೈಕಮಾಂಡ್ ಮನಸ್ಸು ಮಾಡಿದರೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಸಿದ್ದರಾಮಯ್ಯಗೆ ಅಧಿಕಾರ ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಗೊತ್ತಿದೆ. ಸಿದ್ದರಾಮಯ್ಯ ಸುದೀರ್ಘವಾಗಿ ಮಂತ್ರಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. 15 ಭಾರಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಯಾವ ರೀತಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ಬಗ್ಗೆ ಅನುಭವ ಅವರ ಜೀವನದಲ್ಲಿ ಸಾಕಷ್ಟು ಆಗಿದೆ. ಹೀಗಾಗಿ ಸಡನ್ ಆಗಿ ಅವರು ಬಿದ್ದು ಬಿಡುತ್ತಾರೆ ಎಂದು ನಾನು ಹೇಳಲ್ಲ. ರಾಜ್ಯ ಸರ್ಕಾರ ಪತನವಾಗುತ್ತೆ, ನಾವು ಬೀಳಿಸುತ್ತೇವೆ ಎಂಬ ಬಗ್ಗೆ ನಾನು ಮಾತನಾಡಲ್ಲ. ಸಂಪೂರ್ಣ ಬಹುಮತವಿರುವ ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ. ಅವರ ಪಕ್ಷದಲ್ಲೇ ದಿಢೀರ್ ಭಿನ್ನಾಭಿಪ್ರಾಯ ಬಂದರೇ ಸರ್ಕಾರ ಬೀಳಬಹುದು ಎಂದು ಹೇಳಿದರು.