ಬೆಂಗಳೂರು: ಉತ್ತರಾಖಂಡದಲ್ಲಿ ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಒಂಭತ್ತು ಮಂದಿ ಚಾರಣಿಗರ ಮೃತದೇಹಗಳನ್ನು ಇಂದು ಬೆಂಗಳೂರಿಗೆ ತರಲಾಗಿದೆ.
ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಮೃತದೇಹಗಳನ್ನು ತರಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೃತರ ನಿವಾಸಗಳಿಗೆ ಮೃತದೇಹಗಳನ್ನು ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಕರ್ನಾಟಕ ರಾಜ್ಯ ನೈಸರ್ಗಕ ವಿಪತ್ತು ಕೇಂದ್ರ ಹಾಗೂ ಕಂದಾಯ ಇಲಾಖೆ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
ಪಾರ್ಥೀವ ಶರೀರಗಳನ್ನು ರವಾನೆ ಮಾಡಲು ಬಿಬಿಎಂಪಿಯ ಒಂಭತ್ತು ಶ್ರದ್ದಾಂಜಲಿ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ವಿಮಾನ ನಿಲ್ದಾಣದಲ್ಲೇ ಒಂಭತ್ತು ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ 7 ದಿನಗಳ ಕಾಲ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
ಟ್ರಕ್ಕಿಂಗ್ನಲ್ಲಿ ಅಗಲಿದ 9 ಮಂದಿಗೆ ಸಂತಾಪ:
ಉತ್ತರಾಖಂಡ ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ಮೃತಪಟ್ಟ ಮೃತದೇಹಗಳನ್ನ ಬೆಂಗಳೂರಿಗೆ ತರಲಾಗಿದೆ. ಚಾರಣದ ವೇಳೆಯಲ್ಲಿ ಮೃತಪಟ್ಟವರಿಗೆ ಕರ್ನಾಟಕ ಮೌಂಟೇರಿಯನ್ ಅಸೋಸಿಯೇಷನ್ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ ಮೌಂಟೇರಿಯನ್ ಅಸೋಸಿಯೇಷನ್ ಆಯೋಜನೆ ಮಾಡಲಾಗಿದ್ದ ಈ ಟ್ರೆಕ್ಕಿಂಗ್ ನಲ್ಲಿ ಇದುವರೆಗೆ ಎಂದೂ ಇಂತಹಾ ಅವಘಡಗಳು ಸಂಭವಿಸಿರಲಿಲ್ಲ. ಕರ್ನಾಟಕದ 13 ಮಂದಿ ಚಾರಣಕ್ಕೆಂದು ಉತ್ತರಾಖಂಡ್ ನ ಸಹಸ್ರತಾಲ್ ಗೆ ತೆರಳಿದ್ದರು. ಚಾರಣ ಮುಗಿಸಿ ವಾಪಸ್ ಬರುವ ವೇಳೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿ, 9 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರ ಪಾರ್ಥೀವ ಶರೀರಗಳನ್ನು ಇಂದು ಬೆಂಗಳೂರಿಗೆ ತರಲಾಗಿದೆ.