ಚಿತ್ರದುರ್ಗ: ನಗರದ ಹೊರವಲಯದಲ್ಲಿನ ಮನೆಯೊಂದರಲ್ಲಿ ಐದು ಅಸ್ತಿ ಪಂಜರ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, FSL ತಂಡ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಿತ್ತು. ಎಲ್ಲಾ ಸ್ಯಾಂಪಲ್ಸ್ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೊರೆಟರಿಗೆ ಕಳುಹಿಸಲಾಗಿತ್ತು. ಇದು ತುಂಬಾ ಸೂಕ್ಷ್ಮ ಪ್ರಕರಣವಾದ್ದರಿಂದ ರಿಪೋರ್ಟ್ ತಡವಾಗಿ ಬಂದಿದೆ. ರಿಪೋರ್ಟ್ನಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಅಂಜಲಿ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಆರೋಪಿ
ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ. ಅಡುಗೆ ಮನೆಯಲ್ಲಿದ್ದ 2 ಪಾತ್ರೆಗಳಲ್ಲಿ ಸೈನೈಡ್ ಸಿಕ್ಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಮೃತರ್ಯಾರೂ ಸೈನೈಡ್ ಸೇವಿಸಿರುವುದು ಕಂಡು ಬಂದಿಲ್ಲ. ತನಿಖೆ ಪ್ರಕಾರ ಫೆಬ್ರವರಿ ಇಲ್ಲವೇ ಮಾರ್ಚ್ 2019ರಲ್ಲಿ ಇವರೆಲ್ಲ ಸಾವಿಗೀಡಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಅಂದರೆ ನಾಲ್ಕು ವರ್ಷಗಳಿಗೂ ಮೊದಲೇ ಸಾವಾಗಿರಬಹುದೆಂದು ಶಂಕಿಸಲಾಗಿದೆ. ಸಾವು ಯಾವಾಗ ಆಗಿದೆ ಎಂದು ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಖಚಿತವಾಗಿ ಹೇಳಲಾಗಿಲ್ಲ. ತಂಡದ ಎಲ್ಲಾ ರೀತಿ ಆಯಾಮದ ತನಿಖೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಸಾವಿನ ಸುತ್ತ ಮತ್ತೆ ಏನಾದರೂ ಇರಬಹುದಾ ಎಂಬ ಕಾರಣಕ್ಕೆ ತನಿಖೆಯನ್ನು ಸಿಪಿಐ ನೇತೃತ್ವದಲ್ಲಿ ಮುಂದುವರಿಸಲಾಗಿದೆ ಎಂದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.