ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಹೈದರಾಬಾದ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಅಲಂಕರಿಸಿತು.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, 141 ರನ್ ಗಳಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ, 18.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಆರ್ಸಿಬಿ ಪ್ಲೇಆಫ್ ಕನಸನ್ನು ಭಗುತೇಕ ಭಗ್ನ ಮಾಡಿತು.
142 ರನ್ ಗುರಿ ಬೆನ್ನಟ್ಟಿದ ಚೆನ್ನೈಗೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. 27 ರನ್ ಗಳಿಸಿ ರಚಿನ್ ರವೀಂದ್ರ ಔಟಾದರು. ಬಳಿಕ ಬಂದ ಡೇರಿಲ್ ಮಿಚೆಲ್ 22 ರನ್ ಸಿಡಿಸಿ ನಿರ್ಗಮಿಸಿದರು. ಮೊಯಿನ್ ಅಲಿ 10 ರನ್ಗೆ ಆಟ ಮುಗಿಸಿದರು.
ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಆಸರೆಯಾದರು. ಶಿವಂ ದುಬೆ 18, ರವೀಂದ್ರ ಜಡೇಜಾ 5 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಸಮೀರ್ ರಿಜ್ವಿ ಜೊತೆಗೂಡಿ ಗಾಯಕ್ವಾಡ್ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಋತುರಾಜ್ ಗಾಯಕ್ವಾಡ್ ಅಜೇಯ 42 ಹಾಗೂ ಸಮೀರ್ ರಿಜ್ವಿ ಅಜೇಯ 15 ಸಿಡಿಸಿದರು.
RCB ಪ್ಲೇಆಫ್ ಕನಸಿಗೆ ಸಂಕಷ್ಟ
ರಾಜಸ್ಥಾನ್ ರಾಯಲ್ಸ್ ಪರ ರವಿಚಂದ್ರನ್ ಅಶ್ವಿನ್ 2, ಯುಜ್ವೇಂದ್ರ ಚಾಹಲ್ ಹಾಗೂ ನಾಂದ್ರೆ ಬರ್ಗರ್ ತಲಾ ಒಂದು ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ಗೆ ಮತ್ತಷ್ಟು ಹತ್ತಿರವಾಗಿದೆ. ಅಲ್ಲದೇ ಆರ್ಸಿಬಿ ಪ್ಲೇಆಫ್ ಕನಸಿಗೆ ಸಂಕಷ್ಟ ತಂದೊಡ್ಡಿದೆ.
RR ನಿಧಾನ ಗತಿಯ ಬ್ಯಾಟಿಂಗ್
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಚೆನ್ನೈ ಬೌಲರ್ಗಳು ಇದನ್ನು ಸದುಪಯೋಗಪಡಿಸಿಕೊಂಡರು. ರಾಜಸ್ಥಾನ ಪರ ರಿಯಾನ್ ಪರಾಗ್ 47, ಯಶಸ್ವಿ ಜೈಸ್ವಾಲ್ 24, ಸಂಜು ಸ್ಯಾಮ್ಸನ್ 15, ಜೋಸ್ ಬಟ್ಲರ್ 21, ಧ್ರುವ್ ಜುರೆಲ್ 28 ರನ್ ಗಳಿಸಿದರು. ಚೆನ್ನೈ ಪರ ಸಿಮರ್ಜೀತ್ ಸಿಂಗ್ 3 ಹಾಗೂ ತುಷಾರ್ ದೇಶಪಾಂಡೆ 2 ವಿಕೆಟ್ ಪಡೆದು ಮಿಂಚಿದರು.