ನವದೆಹಲಿ : ಹುಬ್ಬಳ್ಳಿಯಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಪ್ರಕರಣ ನಿಜವಾಗಿಯೂ ಲವ್ ಜಿಹಾದ್ ಪ್ರಕರಣ ಆಗಿದೆ. ನಾವು ಅದಕ್ಕೆ ಲವ್ ಜಿಹಾದ್ ಬಣ್ಣ ಕಟ್ಟುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಅವರು, ನೇಹಾ ಹಿರೇಮಠ್ ಪ್ರಕರಣಕ್ಕೆ ನಾವು ಲವ್ ಜಿಹಾದ್ ಬಣ್ಣ ಕಟ್ಟುತ್ತಿಲ್ಲ. ಇದು ಖಂಡಿತವಾಗಿಯೂ ಲವ್ ಜಿಹಾದ್ ಪ್ರಕರಣವೇ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನೇಹಾ ಹೀರೇಮಠ್ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವೈಯಕ್ತಿಕ ಕಾರಣಗಳಿಗೆ ನಡೆದಿದೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕ ಸಿಎಂ, ಡಿಸಿಎಂ ಅಲ್ಪ ಸಂಖ್ಯಾತರ ಮತಬ್ಯಾಂಕ್ಗಾಗಿ ಆ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸತ್ಯ ಮುಚ್ಚಿಡುತ್ತಿದೆ
ನಾನು ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ, ಕಾಲೇಜು ಕ್ಯಾಂಪಸ್ನಲ್ಲಿ ಈ ರೀತಿ ಕೊಲೆ ನಡೆಯುತ್ತದೆ ಎಂದರೆ ಅದು ವೈಯಕ್ತಿಕ ವಿಷಯ ಹೇಗಾಗುತ್ತದೆ? ಕಾಲೇಜು ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಸಿಗಬೇಕೋ ಬೇಡವೋ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಸತ್ಯ ಮುಚ್ಚಿಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.