ಕಲಬುರಗಿ : ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ ಬನ್ನಿ. ಮಣ್ಣಲ್ಲಿ ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಕಳೆದ ಬಾರಿ ಸೋಲಾಯ್ತು ಆಗಲಿ. ಸೋಲಾದ್ರು ದೊಡ್ಡ ಸ್ಥಾನ ಸಿಕ್ಕಿದೆ ಎಂದು ತಿಳಿಸಿದರು.
ನಿಮ್ಮ ವೋಟು ನನಗೆ ತಪ್ಪಿದ್ರೆ ನಿಮ್ಮ ಹೃದಯ ಗೆಲ್ಲೋದಕ್ಕೆ ನನಗೆ ಸಾಧ್ಯ ಆಗಲಿಲ್ಲ ಅಂತ ತಿಳಿದುಕೊಳ್ಳತ್ತೇನೆ. ಮತ ಹಾಕೋಕೆ ಬರದೆ ಇದ್ದರೂ ಕೂಡ, ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು ನೀವು. ನಾವು ಸತ್ತರೆ ನಮ್ಮ ಕೆಲಸ ನೆನೆಸಿಕೊಂಡು ಮಣ್ಣು ಹಾಕೋಕೆ ಬನ್ನಿ. ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ ಬನ್ನಿ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ. ಆವಾಗ ನೋಡಪ್ಪ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತಾನಾದ್ರು ಹೇಳಬೇಕು ಎಂದು ಹೇಳಿದರು.
ಸಿಕ್ಕಿದ್ಯಾ ನೌಕರಿ ಯಾರಿಗಾದ್ರು?
ನಾನು ಪ್ರಧಾನಿ ಆದ್ರೆ ಪ್ರತಿ ವರ್ಷ ಎರಡು ಕೋಟಿ ನೌಕರಿ ಕೊಡ್ತೆನೆ ಅಂತ ಹೇಳಿದ್ರು. ಸಿಕ್ಕಿದೆಯಾ ನೌಕರಿ ಯಾರಿಗಾದ್ರು? 15 ಲಕ್ಷ ರೂಪಾಯಿ ಕೊಟ್ಟರಾ ಮೋದಿ? ಅವರು ಬಂದರೆ ಕೇಳಬೇಕು. ಕಾಂಗ್ರೆಸ್ ಅವರ ಬಳಿಯಿದ್ದ ಹಣ ತಂದು ಎಲ್ಲಿಟ್ಟಿದ್ದಿರಿ ಅಂತ ಕೇಳಿ. ಸಾಲಮನ್ನಾ ಆದರೂ ಮಾಡಿದ್ರಾ? ರಾಜ್ಯದಲ್ಲಿ ಸಿದ್ದರಾಮಯ್ಯ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಮಾಡಿರೋದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.