ರಾಮನಗರ : ಕುಮಾರಸ್ವಾಮಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅಂದ್ರು. ಮಾನಗೆಟ್ಟ ನನ್ನ ಮಗ ಅವನು ಎಂದು ಹೆಚ್ಡಿಕೆ ವಿರುದ್ಧ ಏಕವಚನದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಹುಟ್ಟೂರು ದೊಡ್ಡಾಲನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 136 ಕ್ಷೇತ್ರಗಳನ್ನ ಗೆದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ನವರು ನಮ್ಮನ್ನ ಟೀಕೆ ಮಾಡ್ತಿದ್ರು. ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಲು ಐದು ಗ್ಯಾರಂಟಿ ಕೊಡ್ತಿದ್ದೇವೆ ಎಂದು ಹೇಳಿದ್ದಾರೆ.
ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಅನಿತಾ ಕುಮಾರಸ್ವಾಮಿ ನಿಲ್ಲಿಸಿದ್ರು. ಆಗಲೂ ಡಿ.ಕೆ. ಸುರೇಶ್ ಗೆದ್ದ. ಈಗ ನಾಲ್ಕನೇ ಬಾರಿಗೆ ಚುನಾವಣೆಗೆ ನಿಂತವ್ನೆ. ಒಂದು ಬಾರಿಯೂ ವೇದಿಕೆ ಹತ್ತದ ಅವನು ನಿಮ್ಮ ಸೇವೆ ಮಾಡ್ತಿದ್ದಾನೆ. ಕಮಲ ಒಣಗೋಯ್ತು, ಕುಮಾರಸ್ವಾಮಿ ಬಾಮೈದನನ್ನ ನಿಲ್ಸವ್ರೆ. ಮಂಡ್ಯದಲ್ಲೂ ಕುಮಾರಸ್ವಾಮಿ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ನೀವು ನನಗೆ ಶಕ್ತಿ ಕೊಟ್ಟಿದ್ದೀರಿ. ನಿಮ್ಮ ಶಕ್ತಿಯಿಂದ ಇವತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಬರುವ ಹಾಗೆ ಮಾಡಿದೆ. ನನ್ನನ್ನ ಸಿಎಂ ಆಗ್ತಾನೆ ಅಂತ ನಂಬಿಕೆ ಇಟ್ಟುಕೊಂಡಿದ್ರಿ, ಪಕ್ಷ ಡಿಸಿಎಂ ಮಾಡಿದೆ. ಹಾಗಾಗಿ, ಯಾರೂ ಹತಾಶರಾಗಬೇಡಿ. ನೀವು ಕೊಟ್ಟಿರುವ ಶಕ್ತಿಯಿಂದ ರಾಜ್ಯಾದ್ಯಂತ ಕೆಲಸ ಮಾಡ್ತಿದ್ದೇವೆ. ಕಾಂಗ್ರೆಸ್ ಪಕ್ಷ ಯಾವಾಗ ಏನು ಮಾಡಬೇಕೋ ಅದನ್ನ ಮಾಡುತ್ತೆ ಎಂದು ಹುಟ್ಟೂರಿನಲ್ಲೂ ಡಿಕೆಶಿ ಸಿಎಂ ಆಗುವ ವಿಚಾರ ಪ್ರಸ್ತಾಪಿಸಿದ್ದಾರೆ.
ಮೋದಿ ನಮಗೆ ಖಾಲಿ ಚೊಂಬು ಕೊಟ್ಟವ್ರೆ
ಕೇಂದ್ರದವರು ನಮಗೆ ಖಾಲಿ ಚೊಂಬು ಕೊಟ್ಟವ್ರೆ ಎಂದು ಪ್ರಚಾರದಲ್ಲೂ ಖಾಲಿ ಚೊಂಬು ತೋರಿಸಿದ್ದಾರೆ. ನಮ್ಮ ತೆರಿಗೆಗಾಗಿ ಸಂಸದ ಡಿ.ಕೆ. ಸುರೇಶ್ ಹೋರಾಟ ಮಾಡಿದ್ರು. ಅದಕ್ಕಾಗಿ ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ನಮ್ಮ ಜನ ಯಾರೂ ವಲಸೆ ಹೋಗಬಾರದು. ಅದಕ್ಕಾಗಿ ಅನೇಕ ಯೋಜನೆಗಳನ್ನ ರೂಪಿಸುತ್ತಿದ್ದೇವೆ. ನಿಮ್ಮ ಆಸ್ತಿಗಳ ಮೌಲ್ಯ ಹೆಚ್ಚಾಗುವ ವಾತಾವರಣ ಬರುತ್ತದೆ. ಯಾರೂ ಕೂಡಾ ಆಸ್ತಿ ಮಾರಿಕೊಳ್ಳಬೇಡಿ ಎಂದು ಜನರಿಗೆ ಡಿ.ಕೆ. ಶಿವಕುಮಾರ್ ಕರೆ ಕೊಟ್ಟಿದ್ದಾರೆ.