ಬೆಂಗಳೂರು : ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿಯ 4 ತಿಂಗಳ ಕಾಲದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ನೀಡಿದೆ.
ಫೋಕ್ಸೋ ಪ್ರಕರಣದ ಅಡಿಯಲ್ಲಿ ಈ ಹಿಂದೆ ಜೈಲು ಪಾಲಾಗಿದ್ದ ಶಿವಮೂರ್ತಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು (ಒಡನಾಡಿ ಸಂಸ್ಥೆ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ವಿಕ್ರಮ್ನಾಥ್ ಪೀಠವು, ಶಿವಮೂರ್ತಿ ಜಾಮೀನು ರದ್ದುಪಡಿಸಿ, ಅವರನ್ನು ಪುನಃ ಜೈಲಿಗೆ ಕಳುಹಿಸುವಂತೆ ಆದೇಶ ಹೊರಡಿಸಿದೆ. ಮತ್ತೆ ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಶಿವಮೂರ್ತಿಗೆ ಜೈಲೇ ಗತಿ
ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಶಿವಮೂರ್ತಿಗೆ ಸೂಚನೆ ನೀಡಿದೆ. ಜೊತೆಗೆ ವಿಶೇಷ ಕೋರ್ಟ್ನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈಗಾಗಲೇ ಬೇಲ್ ಮೇಲೆ ಹೊರಗಿರುವ ಶಿವಮೂರ್ತಿಗೆ ಇದೀಗ ಜೈಲೇ ಗತಿಯಾಗಿದೆ.
ಏನಿದು ಶಿವಮೂರ್ತಿ ಪ್ರಕರಣ?
ಎಸ್ಜೆಎಂ ವಿದ್ಯಾಪೀಠದಲ್ಲಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಸಂಬಂಧ ಶಿವಮೂರ್ತಿಯನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಜಾಮೀನಿನ ಮೇಲೆ ಹೊರ ಬಂದ ಶಿವಮೂರ್ತಿ, ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳುತ್ತಿದ್ದರು.