ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಕೊಡುವ ಗ್ಯಾರಂಟಿ ನಿಜವಾದ ಗ್ಯಾರಂಟಿ. ಒಂದು ಬಾರಿ ಮಾತು ಕೊಟ್ಟರೆ ಯಾವತ್ತಿಗೂ ಅದು ಮುಂದುವರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷದಲ್ಲಿ 2.93 ಲಕ್ಷ ಕೋಟಿ ತೆರಿಗೆ ಹಂಚಿಕೆ ಆಗಿದೆ. ಈ ಬಾರಿಯ ಚುನಾವಣೆ ದೇಶದ ಅಖಂಡತೆಯ ಚುನಾವಣೆಯಾಗಿದೆ. ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳನ್ನ ಗೆಲ್ಲಿಸಿ, ದೆಹಲಿಗೆ ಕರೆದುಕೊಂಡು ಹೋಗುವ ವಿಶ್ವಾಸ ಇದೆ ಎಂದರು.
ಒಕ್ಕಲಿಗ ಸರ್ಕಾರವನ್ನು ಬಿಜೆಪಿಯವರೇ ತೆಗೆದ್ರು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಇಂತಹ ಹೇಳಿಕೆಯನ್ನು ಬಿಟ್ಟು ಬೇರೆ ಏನು ಹೇಳೋಕೆ ಸಾಧ್ಯ? ಒಕ್ಕಲಿಗ ಸಮಾಜ ಸೇರಿದಂತೆ ಎಲ್ಲರು ಕೂಡ ಒಂದಾಗಿದ್ದಾರೆ. ನಮ್ಮ ಜೊತೆ ಇದ್ದಾರೆ, ಇದರಲ್ಲಿ ಡಿ.ಕೆ. ಶಿವಕುಮಾರ್ ಪ್ರವೀಣರು ಅಲ್ವಾ..? ಎಲ್ಲದ್ದಕ್ಕೂ ಅವರೇ ಉತ್ತರ ಕೊಡ್ತಿದ್ದಾರೆ. ಅವರೇ ಸ್ವಾಮೀಜಿಗಳನ್ನು ಕೇಳಲಿ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿದೆ
ಲೋಕಸಭಾ ಚುನವಣೆ ನಡೆಯುತ್ತಿದೆ ಎನ್ನುವುದನ್ನೇ ಕಾಂಗ್ರೆಸ್ ಮರೆತು ಹೋಗಿದೆ. ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿದೆ. ಹಾಗಾಗಿ, ಅವರ ಹೆಸರು ಹೇಳಲು ತಯಾರಿಲ್ಲ. ಅವರಿಗೆ ವಿಶ್ವಾಸ್ವಾರ್ಹ ನಾಯಕತ್ವ ಇಲ್ಲ. ಹೀಗಾಗಿ, ಅನುದಾನ ವಿಚಾರ ಎತ್ತಿಕೊಂಡು ಜನರ ಹಾದಿ ತಪ್ಪಿಸುತ್ತಾ ಇದ್ದಾರೆ. ಮೋದಿಯವರ ಅಭಿವೃದ್ಧಿ ಕಾರ್ಯದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಕುಟುಕಿದರು.
ಈಶ್ವರಪ್ಪ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ
ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಫರ್ಧೆ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ. ಅವರ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲ್ಲ. ನಾನು ಇವತ್ತಿನಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತಿದ್ದೇನೆ. ಅಲ್ಲೊಬ್ಬರು ಇಲ್ಲೊಬ್ಬರು ಟೀಕೆ ಮಾಡಬಹುದು. ತೆರಿಗೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.