Wednesday, May 1, 2024

ಜನಾರ್ದನ ರೆಡ್ಡಿ ಅಮಿತ್ ಶಾ, ವಿಜಯೇಂದ್ರ ಸಂಪರ್ಕದಲ್ಲಿದ್ದಾರೆ : ಶ್ರೀರಾಮುಲು ಹೊಸ ಬಾಂಬ್

ಬಳ್ಳಾರಿ : ಶಾಸಕ ಜನಾರ್ದನ ರೆಡ್ಡಿ ಅವರು ಅಮಿತ್ ಶಾ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಂಪರ್ಕದಲ್ಲಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಅವರನ್ನು ನಾನು ಇದುವರೆಗೆ ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.

ಜನಾರ್ಧನ ರೆಡ್ಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ ನಮಗೆಲ್ಲಾ ದೊಡ್ಡ ಶಕ್ತಿ ಬರಲಿದೆ. ಜನಾರ್ಧನ ರೆಡ್ಡಿ ಈ ಭಾಗದ ದೊಡ್ಡ ನಾಯಕರಿದ್ದಾರೆ. ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ್ರೆ ಅನುಕೂಲವಾಗುತ್ತೆ ಅಂತ ವರಿಷ್ಠರಿಗೆ ನಾನು ಹೇಳಿದ್ದೇನೆ ಎಂದು ಪರೋಕ್ಷವಾಗಿ ರೆಡ್ಡಿ ಸೇರ್ಪಡೆ ಬಗ್ಗೆ ಸುಳಿವು ನೀಡಿದರು.

ಮೋದಿ ಅಲೆಗೆ ಸಚಿವರು ಭಯ ಬಿದ್ದಿದ್ದಾರೆ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಅಲೆ, ವರ್ಚಸ್ಸಿಗೆ ರಾಜ್ಯದ ಸಚಿವರು ಭಯ ಬಿದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 136 ಶಾಸಕರನ್ನ ಗೆದ್ರೂ, ಲೋಕಸಭಾ ಚುನಾವಣೆಯಲ್ಲಿ ಜನರು ಕೈಹಿಡಿಯಲ್ಲ ಅನ್ನೋದು ಗೊತ್ತಾಗಿದೆ. ರಾಜ್ಯ ಸರ್ಕಾರ ಕೇವಲ ಒಂದು ವರ್ಷದಲ್ಲಿ ವಿಶ್ವಾರ್ಹತೆ ಕಳೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದೆ ಎಂದು ಕುಟುಕಿದರು.

ಈಶ್ವರಪ್ಪ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಟ್ಟಾ ಹಿಂದುತ್ವವಾದಿ. ಈಶ್ವರಪ್ಪನವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಪಕ್ಷದ ವರಿಷ್ಠರು ಈಶ್ವರಪ್ಪನವರನ್ನ ಮನವೊಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಶ್ರೀರಾಮುಲು ಹೇಳಿದರು.

RELATED ARTICLES

Related Articles

TRENDING ARTICLES