ಬೆಂಗಳೂರು : ರಾಜಕಾರಣದಲ್ಲಿ ನಾನೂ ಕೂಡ 45 ವರ್ಷ ಮಣ್ಣು ಹೊತ್ತಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಲೋಕಸಭಾ ಟಿಕೆಟ್ ಆಕಾಂಕ್ಷಿ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ, ನೋವುಗಳ ಬಗ್ಗೆ ಚರ್ಚೆಯಾಗಿದೆ. ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಯಡಿಯೂರಪ್ಪ, ವಿಜಯೇಂದ್ರ ಜೊತೆ ಚರ್ಚೆಯಾಗಿದೆ. ಯಾವುದೇ ಗೊಂದಲ ಬೇಡ ಅಂತ ಹೇಳಿದ್ದಾರೆ ಎಂದು ಹೇಳಿದರು.
ನನ್ನ ಅಸಮಾಧಾನ ಹೊರ ಹಾಕಿದ್ದೇನೆ
ಮುಂದಿನ ಮೇ ವರೆಗೂ ಚುನಾವಣೆ ಕಾವು ಇರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಬಯಕೆ, ಅದಕ್ಕೆ ಪಣ ತೊಟ್ಟಿದ್ದೇವೆ. ನನ್ನ ಅಸಮಾಧಾನ ಈಗಾಗಲೇ ಹೊರ ಹಾಕಿದ್ದೇನೆ. ನಿಮಗೂ ಗೊತ್ತಿದೆ. ಎಲ್ಲದಕ್ಕಿಂತ ದೇಶ ದೊಡ್ಡದು. ಯಡಿಯೂರಪ್ಪ ಅವರು ಹೇಳಿದ್ದಾರೆ, ಅವರ ಜೊತೆ ಹೋಗೋಣ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ನಾನು ಬೇರೆ ಪಕ್ಷಕ್ಕೆ ಹೋಗ್ತೀನಿ ಅಂತ ಹೇಳಿದ್ನಾ?
ನಾನು ಯಾವುದಾದರೂ ಪಕ್ಷಕ್ಕೆ ಹೋಗ್ತೀನಿ ಅಂತ ಹೇಳಿದ್ದೇನಾ? ನೀವು ಕುಸ್ತಿ ಆಡಲ್ವಾ? ಮ್ಯಾನೇಜ್ಮೆಂಟ್ ಜೊತೆ ಕುಸ್ತಿ ಮಾಡಲ್ವಾ? ಕಾಂಗ್ರೆಸ್ಗೆ ಉತ್ತರ ಕೊಡಬೇಕು ಅದಕ್ಕೆ ನಿರ್ಧಾರ ಮಾಡುತ್ತಿದ್ದೇವೆ. ರಾಜಕಾರಣದಲ್ಲಿ ನಾನೂ ಕೂಡ 45 ವರ್ಷ ಮಣ್ಣು ಹೊತ್ತಿದ್ದೇನೆ. ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನೋಡುತ್ತಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಸೀಟು ಅಂತಲ್ಲ, ಗೆಲ್ಲೋದು ಮುಖ್ಯ
ತುಮಕೂರಿನಲ್ಲಿ ಹಾಲಿ ಸಂಸದ ಜಿ.ಎಸ್. ಬಸವರಾಜ್ ವಯಸ್ಸಿನ ಕಾರಣ ಸ್ಪರ್ಧೆ ಮಾಡಲ್ಲ ಅಂತ ಹೇಳಿದ್ದಾರೆ. ಅದಕ್ಕೆ ಅದು ಬಿಜೆಪಿ ಸೀಟು ಆಗಿದೆ. ಜೆಡಿಎಸ್ ಸೀಟು ಅಂತಲ್ಲ, ನಮಗೆ ಗೆಲ್ಲುವುದು ಮುಖ್ಯ ಎಂದು ವಿ. ಸೋಮಣ್ಣ ತಿಳಿಸಿದರು.