ಬೆಂಗಳೂರು : ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ರೀತಿ ಪದೇ ಪದೆ ಮೋಸ ಮಾಡೋದನ್ನ ಜನ ಸಹಿಸಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಬೇಸರಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಶೇಖರ್ ಅವರನ್ನು ಮಂತ್ರಿ ಮಾಡಿ, ಮೈಸೂರು ಜಿಲ್ಲಾ ಉಸ್ತುವಾರಿ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ. ಇದು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಕುಟುಕಿದರು.
ನಮ್ಮ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಏನೆಲ್ಲಾ ಮಾಡಬಹುದು ಅನ್ನೋದು ತಿಳಿಸಿದ್ದಾರೆ. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದ್ರು. ದ್ರೋಹ ಬಗೆಯಲ್ಲ ಅಂತ ಹೇಳಿದ್ರು. ಸೋಮಶೇಖರ್ ಅವರು ಡಿ.ಕೆ. ಶಿವಕುಮಾರ್ ಜೊತೆಗೆ, ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನು ಕ್ಷಮಿಸಲ್ಲ ಎಂದು ಹೇಳಿದರು.
ತಾಯಿಗೆ ಮೋಸ ಮಾಡಲ್ಲ ಅಂದಿದ್ರು
ನಮ್ಮ ಮತದಾನ 47, ಬಿಜೆಪಿ ಅಭ್ಯರ್ಥಿಗೆ ಮತ ಹಾಕಲು ವಿಪ್ ಕೊಟ್ಟಿದ್ದೆವು. ಎಸ್.ಟಿ. ಸೋಮಶೇಖರ್, ಹೆಬ್ಬಾರ್ಗೂ ವಿಪ್ ಕಳಿಸಿದ್ದೆವು. ಅವರ ಪಿಎ, ಸೋಮಶೇಖರ್ ಮನೆಗ ವಿಪ್ ಜಾರಿ ಮಾಡಿತ್ತು. ಹೆಬ್ಬಾರ್ ಎಲ್.ಹೆಚ್ ಕೊಠಡಿಗೂ ವಿಪ್ ನೀಡಲಾಗಿದೆ. ಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತಾಡಿದ್ರು. ಹೆಬ್ಬಾರ್ ಕೊನೆ ಕ್ಷಣದವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು ಎಂದು ಆರ್. ಅಶೋಕ್ ತಿಳಿಸಿದರು.