ಬೆಳಗಾವಿ : ರಾಜ್ಯಕ್ಕೆ ಇಂದು ಕರಾಳ ಶುಕ್ರವಾರ. ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಪಘಾತ ಕುರಿತು ಸಂಚಾರ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಕಾಲುವೆ ಬಳಿ ಜತ್ತ-ಜಾಂಬೋಟಿ ರಸ್ತೆಯಲ್ಲಿ ಸಂಭವಿಸಿದೆ.
ಗುರ್ಲಾಪುರದ ಮಲ್ಲಿಕಾರ್ಜುನ ಮರಾಠೆ, ಲಕ್ಷ್ಮೀ ಮರಾಠೆ, ಆಕಾಶ್ ಮರಾಠೆ, ಬೈಕ್ ಸವಾರರಾದ ನಿಪನಾಳ ಗ್ರಾಮದ ಶ್ರೀಕಾಂತ್ ಪಡತರಿ ಹಾಗೂ ಮುಗಳಖೋಡ ನಿವಾಸಿ ನಾಗಪ್ಪ ಯಡವನ್ನವರ್ ಮೃತರು. ಬೈಕ್ಗೆ ಡಿಕ್ಕಿಯಾದ ಬಳಿಕ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
2 ಕಾರುಗಳ ಡಿಕ್ಕಿ, ಮೂವರು ಸಾವು
ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಮತ್ತೊಂದು ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಬಳಿ ನಡೆದಿದೆ. ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಮುತ್ತು ನಾಯಕ್, ಗೋಪಾಲ್ ನಾಯಕ್ ಹಾಗೂ ಧಾರವಾಡ ಮೂಲದ ಅನ್ನಪೂರ್ಣಾ ಶಿರೋಳ ಮೃತ ದುರ್ದೈವಿಗಳು. ಇಬ್ಬರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.