ಬೆಂಗಳೂರು : ಕೆ.ಜಿ ಹಳ್ಳಿ – ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಗಲಭೆಕೋರರಿಂದಲೇ ನಷ್ಟ ಭರ್ತಿಗೆ ಸರ್ಕಾರ ನಿರ್ಧರಿಸಿದೆ.
ಗಲಭೆ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಇಂಥಾ ಘಟನೆ ಆಗದಂತೆ ಎಚ್ಚರವಹಿಸಿ. ಪ್ರಕರಣದಲ್ಲಿ ಯಾರೇ ಭಾಗವಹಿಸಿದ್ರೂ ಅಂಥವರ ಹೆಡೆಮುರಿಕಟ್ಟಿ, ಗಲಭೆಕೋರರಿಂದಲೇ ನಷ್ಟ ತುಂಬಿ ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ` ಕ್ಲೇಮ್ ಕಮಿಷನರ್ ಒಬ್ಬರನ್ನು ನೇಮಕ ಮಾಡುವಂತೆ ಹೈಕೋರ್ಟ್ಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಎ ಜೆ ಪ್ರಭುಲಿಂಗ ನಾವಡಗಿಯವರ ಜೊತೆ ಚರ್ಚಿಸಿ ಸಿಎಂ ಈ ಬಗ್ಗೆ ಸೂಚನೆ ನೀಡಿದ್ದು, ಗಲಭೆ ಕೋರರಿಂದಲೇ ನಷ್ಟಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ’’ ಎಂದು ತಿಳಿಸಿದರು.
ತಲೆ ಮರೆಸಿಕೊಂಡಿರುವ ಪುಂಡರ ಬಗ್ಗೆ ತನಿಖೆ ನಡೆಯುತ್ತಿದೆ. ಬಂಧಿತರಿಂದ ಮಾಹಿತಿ ಪಡೆದು ತಪ್ಪಿಸಿಕೊಂಡಿರುವವರನ್ನು ಪೊಲೀಸರು ಬಂಧಿಸುತ್ತಾರೆ. ಗಲಭೆಕೋರರಿಂದಲೇ ನಷ್ಟ ಭರ್ತಿ ಮಾಡಲು ತೀರ್ಮಾನಿಸಲಾಗಿದ್ದು, ಅವರ ಆಸ್ತಿ ಮುಟ್ಟುಗೋಲಿಗೂ ಚರ್ಚೆ ನಡೆದಿದೆ ಎಂದು ಹೇಳಿದರು.