ಬೆಂಗಳೂರು : ಅತಿವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ 4 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಾಯಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಡನೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ರಾಜ್ಯ ಸರ್ಕಾರ ತನ್ನ 12 ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನು ವಿವರಿಸಿತು. ಸರ್ಕಾರದ ಪರವಾಗಿ ಸಚಿವರಾದ ಬಸವರಾಜ್ ಬೊಮ್ಮಾಯಿ ಹಾಗೂ ಆರ್. ಅಶೋಕ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಭಾಗವಹಿಸಿದ್ದರು.
ಅತಿವೃಷ್ಟಿಯಿಂದ ಬಾಧಿತವಾಗಿರುವ ರಾಜ್ಯಕ್ಕೆ 4 ಸಾವಿರ ಕೋಟಿ ರೂ ಪರಿಹಾರ ಪ್ಯಾಕೇಜ್ ತತ್ಕ್ಷಣವೇ ಘೋಷಿಸಬೇಕು. ರಾಜ್ಯಕ್ಕೆ ನಾಲ್ಕು ಎನ್ಡಿಆರ್ಎಫ್ ತಂಡ ಕಳುಹಿಸಿ ಕೊಡಬೇಕು. ಕೃಷ್ಣಾ ಮೇಲ್ದಂಡೆಯಲ್ಲಿ ಆಗಿರುವ ಹಾನಿಯ ಅಧ್ಯಯನಕ್ಕೆ ಪ್ರತ್ಯೇಕ ತಂಡ ಕಳುಹಿಸಬೇಕು. ಪಶ್ಚಿಮ ಘಟ್ಟಗಳಿಗೆ ಆಗಿರುವ ಹಾನಿ ಹಾಗೂ ಭೂಕುಸಿತಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ಕಳುಹಿಸಿ ಕೊಡಿ. ಮಳೆಹಾನಿಗೆ ಪ್ರತ್ಯೇಕ ಪ್ಯಾಕೇಜ್ ಕೊಡಿ ಎಂಬ ಬೇಡಿಕೆಗಳನ್ನು ಮೋದಿಯ ಮುಂದಿಟ್ಟರು.