ಚಿತ್ರದುರ್ಗ : `ನಾನು ಒಬ್ಬನೇ ಬಳ್ಳಾರಿಯ ದುರ್ಗಮ್ಮನ ಗುಡಿಗೆ ಬರ್ತಿನಿ, ನೀನು ಬಂದು ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡು’ ಅಂತ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಕ್ಷೇತ್ರ ಮಾಜಿ ಶಾಸಕ ತಿಪ್ಪೇಸ್ವಾಮಿ ಸವಾಲು ಹಾಕಿದ್ದಾರೆ.
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರು, ಬಳ್ಳಾರಿ ಹಾಳು ಮಾಡಿ ಬಂದು ಈಗ ಚಿತ್ರದುರ್ಗ ಜಿಲ್ಲೆಯನ್ನು ಹಾಳು ಮಾಡುತ್ತಿದ್ದೀಯ ಎಂದು ಸಚಿವ ಶ್ರಿರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ತರಲು ನಾನು ಹಲವಾರು ಹೋರಾಟ ಮಾಡಿದ್ದೇನೆ ಹಾಗೂ ವಿವಿಧ ಸಂಘಟನೆಗಳ ಕೂಡ ನಮಗೆ ಸಾಥ್ ನೀಡಿವೆ. ಕ್ಷೇತ್ರದ ರೈತಪರ ಹೋರಾಟಗಾರರ ಫಲವಾಗಿ ಈ ಯೋಜನೆ ಕ್ಷೇತ್ರಕ್ಕೆ ಬಂದಿದೆ. ಮೊಳಕಾಲ್ಮೂರು ಕ್ಷೇತ್ರಕ್ಕೆ ತುಂಗಭದ್ರಾ ಹಿನ್ನೀರು ಯೋಜನೆ ತರಲು ನನ್ನ ಹೋರಾಟದ ಶ್ರಮವಿದೆ.
ನಾನು ಶಾಸಕನಾಗಿದ್ದಾಗ ತಂದ ಯೋಜನೆಗಳನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತೀಯಾ ಅಂತ ಸಚಿವ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಕೆಂಡಾಮಂಡಲರಾದರು.
ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಯಾಕೆ ಮಾಡಿಸುತ್ತಿಲ್ಲ? ಹೇಳಪ್ಪಾ ಶ್ರೀರಾಮುಲು ಎಂದು ಏಕ ವಚನದಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1ಲಕ್ಷದ ಗಡಿ ದಾಟಿದೆ. ಯಡಿಯೂರಪ್ಪ ಕೈಯಲ್ಲಿ ಕೊರೋನಾ ಕಂಟ್ರೋಲ್ ಮಾಡಲು ಆಗುತ್ತಿಲ್ಲ. ಜನರಿಗೆ ಸುಳ್ಳು ಹೇಳುವುದನ್ನು ಬಿಡಿ ಎಂದರು.