ವಿಜಯಪುರ: ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಇನ್ನೋವಾ ಚಾಲಕ, ಕಾರಿನ ಕೆಳಗೆ ಸಿಕ್ಕಿಕೊಂಡ ಸವಾರನನ್ನು ಎರಡೂವರೆ ಕಿಲೋಮೀಟರ್ ದೂರ ಎಳೆದೊಯ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಮೇಲ್ನೋಟಕ್ಕೆ ಇದು ಅಪಘಾತವಾಗಿದ್ದು ಇದು ಯೋಜಿತ ಕೊಲೆ ಇರಬಹುದು ಎಂದು ಕೆಲವರು ಆರೋಪಿಸಿದ್ದಾರೆ.
ವಕೀಲ ರವಿ ಮೇಲಿನಮನಿ (37) ಮೃತ ಬೈಕ್ ಸವಾರ. ಇವರು ಪ್ರಯಾಣಿಸುತ್ತಿದ್ದ ಆ್ಯಕ್ಟಿವಾ ವಾಹನಕ್ಕೆ ಇನ್ನೋವಾ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ನಿಲ್ಲಿಸದ ಇನ್ನೋವಾ ಚಾಲಕ, ವಾಹನದ ಅಡಿಯಲ್ಲೇ ಸಿಲುಕಿದ ಬೈಕ್ ಸವಾರನನ್ನು ಸುಮಾರು ಎರಡೂವರೆ ಕಿಲೋಮೀಟರ್ ಎಳೆದೊಯ್ದಿದ್ದಾನೆ. ಬಸವ ನಗರದಿಂದ ಜಿಲ್ಲಾಪಂಚಾಯತಿ ಪ್ರವೇಶ ದ್ವಾರದವರೆಗೂ ಎಳೆದೊಯ್ದಿದ್ದಾನೆ. ರವಿ ಶವ ಬೇರ್ಪಟ್ಟ ಬಳಿಕ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ನತದೃಷ್ಟ ವಕೀಲರ ಶವ ಚಿಂದಿಚಿಂದಿಯಾಗಿದೆ.
ಇದನ್ನೂ ಓದಿ: ಬೆಳ್ಳಿ ಗೆದ್ದ ಮಗ, ಹೃದಯ ಗೆದ್ದ ತಾಯಿ: ಪಾಕಿಸ್ತಾನದ ನದೀಮ್ ಕೂಡ ನನ್ನ ಮಗನಿದ್ದಂತೆ
ಮೃತ ರವಿ, ಭೀಮಾತೀರದ ಹಂತಕ ಎಂದು ಕುಖ್ಯಾತನಾಗಿರುವ ಬಾಗಪ್ಪ ಹರಿಜನ ಸಂಬಂಧಿಕ. ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ರವಿಯನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು, ಗೆಳೆಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.