ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಇನ್ನೆರೆಡರು ದಿನಗಳಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಈ ನಡುವೆ ದರ್ಶನ್ ನಂಬಿ ಮುಂದಿನ ಸಿನಿಮಾಗಳ ಚಿತ್ರೀಕರಣಕ್ಕೆ ದುಡ್ಡು ಹಾಕಿರುವ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ.
ದರ್ಶನ್ ಬಂಧನಕ್ಕೊಳಗಾದ ಮೇಲೆ ಅವರ ಮುಂದಿರುವ ಚಿತ್ರಗಳ ಭವಿಷ್ಯ ಏನಾಗಲಿದೆ ಎನ್ನುವ ಚರ್ಚೆಗಳು ಶುರುವಾಗಿದೆ. ಸುಮಾರು 14 ಸಿನಿಮಾಗಳು ದರ್ಶನ್ ಕೈಯಲ್ಲಿದ್ದವು ಎಂದು ಹೇಳಲಾಗಿದೆ. ಈಗಾಗಲೇ ಈ ಚಿತ್ರಗಳಿಗಾಗಿ ಸುಮಾರು 30 ಕೋಟಿ ಅಡ್ವಾನ್ಸ್ ಹಣವನ್ನು ನಟ ದರ್ಶನ್ ಪಡೆದಿದ್ದರು ಎಂದು ಗಾಂಧಿನಗರದ ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ: ದಾಸನಿಗೆ ‘139’ ಕಂಟಕ: ಶೆಡ್ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರಿ ಆಮಿಷ
ದರ್ಶನ್ ಅವರು ಕತೆ ಕೇಳಿ ಅಂತಿಮ ಮಾಡಿಕೊಂಡಿದ್ದರಲ್ಲಿ ತೆಲುಗಿನ ಪ್ರಸಾದ್ ಬಾಬು ನಿರ್ಮಾಣದ, ಶ್ರೀಕಾಂತ್ ಅಡ್ಡಾಲ ನಿರ್ದೇಶನದ ಚಿತ್ರವೂ ಒಂದು. ಇದೇ ಸೆಪ್ಟೆಂಬರ್, ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಈ ಚಿತ್ರದ ಶೂಟಿಂಗ್ ಪ್ಲಾನ್ ಆಗಿತ್ತು. ಬಹುತೇಕ ಶೂಟಿಂಗ್ ಲಂಡನ್ನಲ್ಲಿ ನಡೆಯಲಿದೆ ಎನ್ನಲಾಗಿತ್ತು.
ಈ ಮಧ್ಯೆ ಕೋಟಿಗೊಬ್ಬ ಸೂರಪ್ಪ ಬಾಬು ನಿರ್ಮಾಣದ ಚಿತ್ರದ ಕತೆಯೂ ಓಕೆ ಆಗಿತ್ತು. ಜೂನ್ 7ರಂದು ಬಹುಭಾಷೆಯ ನಿರ್ದೇಶಕರೊಬ್ಬರಿಂದ ಸೂರಪ್ಪ ಬಾಬು ಅವರು ದರ್ಶನ್ ಅವರಿಗೆ ಕತೆ ಹೇಳಿಸಿದ್ದರು ಎಂబ ಸುದ್ದಿ ಇದೆ. ‘ನನ್ನ ನಿರ್ಮಾಣದ ಚಿತ್ರದ ಕತೆಯ ಸಾಲು ಓಕೆ ಮಾಡಿದ್ದ ದರ್ಶನ್ ಅವರು, ಬ್ಯಾಂಕಾಕ್ಗೆ ಹೋಗಿ ಬಂದ ಮೇಲೆ ಮುಂದಿನ ಮಾತುಕತೆ ಮಾಡುವ ಬಗ್ಗೆ ಭರವಸೆ ಕೊಟ್ಟಿದ್ದರು’ ಎಂದು ಖುದ್ದು ಸೂರಪ್ಪ ಬಾಬು ಹೇಳಿದ್ದಾರೆ.
ಡೆವಿಲ್ ಚಿತ್ರಕ್ಕೆ ದರ್ಶನ್ 22 ಕೋಟಿ ಸಂಭಾವನೆ:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸಿಲುಕಿಕೊಂಡಿರುವುದರಿಂದ ಈಗ ದರ್ಶನ್ ನಟಿಸಬೇಕಾದ ಸಿನೆಮಾಗಳ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಪ್ರಸಕ್ತ ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನೆಮಾ ಚಿತ್ರೀಕರಣ ಪ್ರಗತಿಯಲ್ಲಿತ್ತು. ಈ ಚಿತ್ರಕ್ಕೆ ದರ್ಶನ್ ಬರೋಬ್ಬರಿ 22 ಕೋಟಿ ರೂಪಾಯಿ ಸಂಭಾವನೆ ನಿಗದಿ ಪಡಿಸಿದ್ದು ಈಗಾಗಲೇ 3 ಕೋಟಿ ರೂಪಾಯಿ ಅಡ್ವಾನ್ಸ್ ಸಹ ಪಡೆದಿದ್ದಾನೆ.
ಈ ಚಿತ್ರ ಇದುವರೆಗೆ ಕೇವಲ 25 ದಿನಗಳ ಶೂಟಿಂಗ್ ಆಗಿದೆ. ಮೊದಲ ಶೆಡ್ಯೂಲ್ ನಲ್ಲಿ ಚಿತ್ರೀಕರಣದ ವೇಳೆಯಲ್ಲಿ ಆಕ್ಷನ್ ಸೀಕ್ವೆನ್ಸ್ ಮಾಡೋದಕ್ಕೆ ಹೋಗಿ ದರ್ಶನ್ ಎಡಗೈ ಮುರಿದುಕೊಂಡಿದ್ದ. ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಾರಣ, ಚಿತ್ರೀಕರಣವನ್ನು ಮುಂದೂಡಲಾಗಿತ್ತು. ದರ್ಶನ್ ಬಂಧನವಾಗುವ ಕೇವಲ ಎರಡು ದಿನಗಳ ಮೊದಲು ಡೆವಿಲ್ ಚಿತ್ರದ ಎರಡನೆ ಹಂತದ ಚಿತ್ರೀಕರಣ ಆರಂಭವಾಗಿತ್ತು.
ಡೆವಿಲ್ ಚಿತ್ರವನ್ನು ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡಲು ನಿರ್ದೇಶಕ ಪ್ರಕಾಶ್ ಉದ್ದೇಶಿಸಿದ್ದರು. ಆದರೆ ಈಗ ದರ್ಶನ್ ಜೈಲುಪಾಲಾಗಿರುವುದರಿಂದ ಡೆವಿಲ್ ಚಿತ್ರದ ವಿಷಯದಲ್ಲಿ ಮುಂದೇನು ಮಾಡಬೇಕು ಎಂದು ತಿಳಿಯದೆ ನಿರ್ದೇಶಕ ಮಿಲನಾ ಪ್ರಕಾಶ್ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಪೊಲೀಸ್ ಪೇದೆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಶನ್ ಗ್ಯಾಂಗ್ ಹಲ್ಲೆ
ಸಿನಿಮಾದ ಬಗ್ಗೆ ಅಷ್ಟೆ ಮಾತನಾಡೋಣ- ಡಾಲಿ ಧನಂಜಯ್:
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ವಿಚಾರಕ್ಕೆ ನಟ ಡಾಲಿ ಧನಂಜಯ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಸಿನಿಮಾದ ಬಗ್ಗೆ ಅಷ್ಟೆ ಮಾತನಾಡೋಣ. ಅದನ್ನು ಹೊರತುಪಡಿಸಿ ಬೇರೆ ಏನು ಬೇಡ. ನಟ ದರ್ಶನ್ ಬಗ್ಗೆ ಯಾವುದೇ ಪ್ರಶ್ನೆಯನ್ನ ನಟ ಡಾಲಿ ಧನಂಜಯ್ ತೆಗೆದುಕೊಂಡಿಲ್ಲ.