ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅವರ ವಿಚಾರ ಕುರಿತು ನಟ ಕಿಚ್ಚ ಸುದೀಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನಿನ ಬಲೆ ಅಂದ್ರೆ ತಪ್ಪಾಗುತ್ತೆ. ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ.
ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ಸಂತ್ರಸ್ತ ಫ್ಯಾಮಿಲಿಗೆ ಅವ್ರ ಪತ್ನಿ, ಹುಟ್ಟೋ ಮಗುವಿಗೆ ನ್ಯಾಯ ಸಿಗಬೇಕು, ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಎಂದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಸುಂದ್ರಿ ಹಿಂದೆ ಬಿದ್ದ ದರ್ಶನ್ ಬಾಳೇ ಛಿದ್ರ!
‘ಚಿತ್ರರಂಗದಿಂದ ಬ್ಯಾನ್ಗಿಂತ ನ್ಯಾಯ ಅನ್ನೋ ಪದ ದೊಡ್ಡದು’:
ಇನ್ನು ಮುಂದುವರೆದಂತೆ ಮಾತನಾಡಿದ ನಟ ಸುದೀಪ್, ಎಲ್ಲರ ಹೃದಯ ನೊಂದಿದೆ. ಚಿತ್ರರಂಗಕ್ಕೂ ಏನು ಸರಿಯಾಗಿ ಕಾಣ್ತಿಲ್ಲ ಕಲಾವಿದರು ತುಂಬಾ ಜನ ಇದಾರೆ. ಚಿತ್ರರಂಗಕ್ಕೂ ಒಂದು ಕ್ಲಿನ್ ಚಿಟ್ ಸಿಕ್ಕಿದೆ.. ಈ ಕೇಸ್ ಇಂದ ದರ್ಶನ್ ಆಚೆ ಬಂದ್ರೆ ಏನು ಇರಲ್ಲ. ಬ್ಯಾನ್ ಅರ್ಥ ಬರಲ್ಲ. ಬ್ಯಾನ್ ಗಿಂತ ನ್ಯಾಯ ಅನ್ನೋ ಪದ ದೊಡ್ಡದು. ಯಾವತ್ತು ಈ ತರ ಆಗಬಾರದು ದರ್ಶನ್ ರಿಲೇಷನ್ಶಿಪ್ ಅಂತ ಅಲ್ಲ. ಎಷ್ಟೋ ವರ್ಷಗಳ ಇತಿಹಾಸ ಚಿತ್ರರಂಗಕ್ಕಿದೆ. ನನ್ ಕಣ್ಣ ಮುಂದೆ ಆ ಫ್ಯಾಮಿಲಿ ಮಾತ್ರ ಬರ್ತಿದೆ ಎಂದರು.
‘ಸೆಲೆಬ್ರಿಟಿಗಳು ಅಂದಾಕ್ಷಣ ನಾವು ದೇವರಲ್ಲ’:
ಇನ್ನು ಸೆಲೆಬ್ರಿಟಿಗಳು ಅಂದಾಕ್ಷಣ ನಾವು ದೇವರಲ್ಲ ಅಂತಾ ನಟ ಸುದೀಪ್ ಹೇಳಿದ್ದಾರೆ. ರೇಣುಕಾಸ್ವಾಮಿ ಕುಟುಂಬ, ಪತ್ನಿಗೆ ನ್ಯಾಯ ಸಿಗಬೇಕು. ಹುಟ್ಟಬೇಕಾಗಿರುವ ರೇಣುಕಾಸ್ವಾಮಿ ಮಗುಗೆ ನ್ಯಾಯ ಸಿಗಬೇಕು. ಕನ್ನಡ ಚಿತ್ರರಂಗಕ್ಕೂ ಈಗ ನ್ಯಾಯ ಸಿಗಬೇಕಿದೆ. ಆರೋಪಿಗಳಿಗೆ ಶಿಕ್ಷೆ ಆಗಿ ನ್ಯಾಯ ಸಿಗಬೇಕಿದೆ ಅಂತಾ ನಟ ಸುದೀಪ್ ತಿಳಿಸಿದ್ದಾರೆ.