ಚಿಕ್ಕಮಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಪರಿಷತ್ ಸದಸ್ಯ ಸಿಟಿ ರವಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ಕೊಲೆ ಪ್ರಕರಣದ ಸುದ್ದಿ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು. ರಾಜಕಾರಣಿಗಳ ಮೇಲಿನ ಟೀಕೆಗೆ ಅದನ್ನೇ ಮಾಡೋ ಹಾಗಿದ್ರೆ ಗಂಟೆಗೊಂದು ಹೆಣ ಬೀಳುತ್ತಿತ್ತು ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಅಂತ ಯಾರೂ ಭಾವಿಸಿರಲಿಲ್ಲ. ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ. ದರ್ಶನ್ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ರು ಅನ್ಸತ್ತೆ. ನಮ್ಮ ಪಕ್ಷ ರೇಣುಕಾಸ್ವಾಮಿ ಕುಟುಂಬದ ಜೊತೆ ಇದೆ, ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.
ಇದನ್ನೂ ಓದಿ: ದರ್ಶನ್ ಡಿಪ್ರೆಷನ್ಗೆ ಹೋಗಿದ್ದಾರೆ :ವಕೀಲ ಅನಿಲ್ ಬಾಬು
ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು. ಆ ಕ್ರೌರ್ಯವನ್ನ ಯಾರೂ ಒಪ್ಪಲು ಸಾಧ್ಯವಿಲ್ಲ. ಅವರಿಗೆ ರಾಜಮರ್ಯಾದೆ, ವಿಶೇಷ ಸವಲತ್ತು ಕೊಡ್ತಿದ್ದಾರೆ ಅನ್ನೋದು ಸಂದೇಶವೇ ಒಳ್ಳೆದಲ್ಲ. ಆ ರೀತಿ ಇದ್ರೆ ಬಲ ಇದ್ದವನಿಗೆ, ಬಡವನಿಗೊಂದು ರೀತಿ ಎಂಬ ಸಂದೇಶ ಹೋಗುತ್ತೆ ಎಂದು ಹೇಳಿದರು.