ಉತ್ತರ ಪ್ರದೇಶ : ಅಯೋಧ್ಯೆಯ ರಾಮಮಂದಿರದ ಆವರಣ ಮತ್ತು ಮಂದಿರದ ಒಳಗೆ ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ಆದೇಶ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಟ್ರಸ್ಟಿ ಅನಿಲ್ ಮಿಶ್ರಾ, ಎಲ್ಲಾ ಭಕ್ತರು ಈ ನಿರ್ಧಾರವನ್ನು ಗೌರವಿಸಬೇಕು, ಮೊಬೈಲ್ ಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಇಡಲು ಲಾಕರ್ ರೂಮ್ ಸೌಲಭ್ಯವಿದೆ. ಅದನ್ನು ಎಲ್ಲಾ ಭಕ್ತರು ಬಳಸಿಕೊಂಡು, ದೇವಾಲಯದಲ್ಲಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಜನಸಾಮಾನ್ಯರು ಮಾತ್ರವಲ್ಲದೆ ವಿಐಪಿಗಳೂ ಕೂಡ ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಹೇಳಲಾಗಿದೆ. ಈ ನಿಯಮ ನಿನ್ನೆಯಿಂದಲೇ ಅನ್ವಯವಾಗಲಿದೆ ಎಂದು ಟ್ರಸ್ಟ್ ಹೇಳಿದೆ. ಇನ್ಮುಂದೆ ರಾಮ ಲಲ್ಲಾನ ದರ್ಶನಕ್ಕೆ ತೆರಳುವ ಭಕ್ತರು ಇದನ್ನು ಅಗತ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
ಬೆಲೆ ಬಾಳುವ ವಸ್ತುಗಳ ಸುರಕ್ಷತೆಗೆ ವ್ಯವಸ್ಥೆ
ನಿನ್ನೆ ನಡೆದ ಸಭೆಯಲ್ಲಿ ಆಡಳಿತಕ್ಕೆ ತಿಳಿಸಿದ್ದೇವೆ. ಭದ್ರತೆ ಮತ್ತು ಭಕ್ತರ ಸೌಲಭ್ಯಗಳನ್ನು ನೋಡಿ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ. ಭಕ್ತರ ಮೊಬೈಲ್ ಫೋನ್ ಸುರಕ್ಷಿತವಾಗಿಡಲು ನಮ್ಮಲ್ಲಿ ಸಂಪೂರ್ಣ ಸೌಲಭ್ಯಗಳಿವೆ. ಯಾವುದೇ ಬೆಲೆ ಬಾಳುವ ವಸ್ತುವನ್ನು ಸುರಕ್ಷಿತವಾಗಿ ಇಡುವ ಸೌಲಭ್ಯವಿದೆ ಎಂದು ಟ್ರಸ್ಟಿ ಅನಿಲ್ ಮಿಶ್ರಾ ತಿಳಿಸಿದ್ದಾರೆ.