ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಜೈಲು ಪಾಲಾಗಿದ್ದಾರೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿ, ನ್ಯಾಯಾಲಯವು ಆದೇಶ ನೀಡಿದೆ.
ದೇವರಾಜೇಗೌಡನ ಬಂಡವಾಳವನ್ನು ಪವರ್ ಟಿವಿ ಬಿಚ್ಚಿಟ್ಟಿತ್ತು. ಪವರ್ ಟಿವಿಯೊಂದಿಗೆ ಸಂತ್ರಸ್ತೆ ದೇವರಾಜೇಗೌಡನ ವಿರುದ್ಧ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.
ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರ ವಶದಲ್ಲಿದ್ದ ದೇವರಾಜೇಗೌಡರನ್ನು ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಿನ್ಸಿಪಲ್ ಸಿ.ಜೆ, ಜೆಎಂಎಫ್ಸಿ ಜಡ್ಜ್ ಸಿದ್ದರಾಮ. ಎಸ್ ಅವರು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಿನ್ನೆ (ಮೇ10) ಚಿತ್ರದುರ್ಗದ ಹಿರಿಯೂರು ಬಳಿ ದೇವರಾಜೇಗೌಡರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ, ಇಂದು ಬೆಳಗ್ಗೆ ಹೊಳೆನರಸೀಪುರಕ್ಕೆ ಕರೆತರಲಾಗಿತ್ತು. ಪೊಲೀಸರು, ದೇವರಾಜೇಗೌಡ ವಿಚಾರಣೆ ನಡೆಸಿದ್ದರು.
ಬಳಿಕ, ದೇವರಾಜೇಗೌಡರನ್ನ ವೈದ್ಯಕೀಯ ಚಿಕಿತ್ಸೆಗೊಳಪಡಿಸಿ, ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ದೇವರಾಜೇಗೌಡರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಇದೀಗ, ದೇವರಾಜೇಗೌಡ ಹಾಸನ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.