ಶಿವಮೊಗ್ಗ: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳಿಗೂ ನೋಟೀಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗದಲ್ಲಿ ಮಲ್ನಾಡ್ ಪಿಯು ಕಾಲೇಜು ಹೆಸರಿನಲ್ಲಿ ಕಾಲೇಜು ನಡೆಸದೇ, ಸರ್ ಎಂ.ವಿ. ಪಿಯು ಕಾಲೇಜು ಹೆಸರಿನಲ್ಲಿ ಅನಧಿಕೃತವಾಗಿ ಕಾಲೇಜು ನಡೆಸಲಾಗುತ್ತಿದೆ. ಅಲ್ಲದೇ, ಶಿವಮೊಗ್ಗದ ಡೆಲ್ಲಿ ವರ್ಲ್ಡ್ ಸ್ಕೂಲ್, ಕುವೆಂಪು ಬಡಾವಣೆಯಲ್ಲಿ ವಿದ್ಯಾಭಾರತಿ ಶಾಲಾ-ಕಾಲೇಜು ಕೂಡ ಅನಧಿಕೃತವಾಗಿದೆ. ಈ ಬಗ್ಗೆ ಜುಲೈ 1ರೊಳಗೆ ಈ ರೀತಿಯ ಎಲ್ಲಾ ಅನಧಿಕೃತ ಶಾಲಾ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ತೆಗೆದುಕೊಳ್ಳಲು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿ.ಪಿ.ಯೋಗೇಶ್ವರ್ ತಲೆ ಕೆಟ್ಟಂತೆ ಮಾತಾಡ್ತಾರೆ: ಶಾಸಕ ಬಾಲಕೃಷ್ಣ
ರಾಜ್ಯದಲ್ಲಿ ಸುಮಾರು 1900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದ್ದು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅದೇ ರೀತಿ ಶಿವಮೊಗ್ಗದಲ್ಲೂ ಹಲವಾರು ಈ ರೀತಿಯ ಅನಧಿಕೃತ ಶಾಲೆಗಳಿರುವುದು ಗಮನಕ್ಕೆ ಬಂದಿದೆ. ಜುಲೈ 1 ರೊಳಗೆ ಅನಧಿಕೃತ ಶಾಲೆಗಳಿಗೆ ನೋಟೀಸ್ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ನೀಟ್ ಗೆ ಸಂಬಂಧಿಸಿದಂತೆ ರಾಜ್ಯದ ಆಯ್ದ ಕಾಲೇಜುಗಳಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ನೀಟ್ ತರಬೇತಿ ನೀಡುವ ಕ್ರಮ ಕೈಗೊಳ್ಳಲಾಗುವುದು. ಬಡ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗುವುದು ಎಂದು ಅವರು ಹೇಳಿದರು.