ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದು, ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಕೊಲೆ ಪ್ರಕರಣದ ಆರೋಪದಲ್ಲಿ ಪೊಲೀಸರು ದರ್ಶನ್ ಮತ್ತು ಅವರ ಸಹಚರರನ್ನು ಜೂನ್ 11ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆದಿದ್ದರು. ಇಂದು ಮಧ್ಯಾಹ್ನ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಮುಂದಿನ ಕ್ರಮದ ಬಗ್ಗೆ ಕೋರ್ಟ್ ತೀರ್ಪು ನೀಡಲಿದೆ.
ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಮತ್ತು ಆತನ ಗ್ಯಾಂಗ್ನನ್ನು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ. ಹೀಗಾಗಿ ದರ್ಶನ್ ಅವರಿಗೆ ಇಂದಿನ ದಿನ ನಿರ್ಣಾಯಕವಾಗಲಿದೆ.
ಇದನ್ನೂ ಓದಿ: ದರ್ಶನ್ ಗ್ಯಾಂಗ್ನ ಕರಾಳ ಮುಖ ಬಿಚ್ಚಿಟ್ಟ ನಿರ್ಮಾಪಕ ಭರತ್!
ಪಶ್ಚಾತ್ತಾಪದಿಂದ ನರಳುತ್ತಿರುವ ನಟ ದರ್ಶನ್:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಇದೀಗ ಕೃತ್ಯದ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ. ಪರಿಚಯಸ್ಥ ಅಧಿಕಾರಿಗಳ ಬಳಿ ದುಃಖದಿಂದ ಮಾತನಾಡಿರುವ ಅವರು, ತನ್ನಿಂದ ತಪ್ಪಾಯ್ತು ಎಂದಿದ್ದಾರೆ ಎನ್ನಲಾಗಿದೆ.
ಮಹಜರು ಪ್ರಕ್ರಿಯೆ ಮುಗಿದ ಬಳಿಕ ದರ್ಶನ್ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಎನ್ನುವಂತಾಗಿದೆ ದರ್ಶನ್ ಪರಿಸ್ಥಿತಿ. ಹೀಗಾಗಿ ಅವರು ಪಶ್ಚಾತ್ತಾಪದಿಂದ ನರಳುತ್ತಿದ್ದಾರೆ. ಅಲ್ಲದೆ, ತನ್ನಿಂದಲೇ ಸಹಚರರ ಜೀವನವೂ ಹಾಳಾಯ್ತು ಎಂದಿರುವ ಅವರು ಈ ಬಗ್ಗೆ ಕೊರಗುತ್ತಿದ್ದಾರೆ. ಜತೆಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರನ್ನು ಮುಂದೆ ಎದುರಿಸುವುದು ಹೇಗೆ ಎನ್ನುವ ಚಿಂತೆಯೂ ಅವರನ್ನು ಕಾಡುತ್ತಿದೆ.
ಠಾಣೆಗೆ ಪವಿತ್ರಾ ಗೌಡ ಕರೆತಂದ ಪೊಲೀಸರು:
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರ ಗೌಡಳನ್ನ ಸಾಂತ್ವನ ಕೇಂದ್ರದಿಂದ ಲಗೇಜ್ ಸಮೇತ ಅನ್ನಪೂರ್ಣೇಶ್ವರಿ ಠಾಣೆಗೆ ಪೊಲೀಸರು ಕರೆ ತಂದಿದ್ದಾರೆ. ಕೊಲೆ ಪ್ರಕರಣದ A1 ಆರೋಪಿಯಾಗಿರುವ ಪವಿತ್ರಾ ಗೌಡ ವಿಚಾರಣೆ ವೇಳೆ ಮೊಂಡಾಟ ಮುಂದುವರೆಸಿದ್ದಾರೆ. ಪೊಲೀಸರು ಏನೇ ಕೇಳಿದ್ರೂ ಸರಿಯಾಗಿ ಉತ್ತರಿಸತ್ತಿಲ್ಲ ಎಂದು ತಿಳಿದು ಬಂದಿದೆ.