ಹಾಸನ: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್ಡ್ರೈವ್ ಪ್ರಕರಣವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಹಾಸನದಲ್ಲಿ ರಾಜ್ಯ ಮಟ್ಟದ ಹೋರಾಟ ನಡೆಸಲಾಗುತ್ತಿದೆ. ಹಾಸನದ ಹೇಮಾವತಿ ಪ್ರತಿಮೆಯಿಂದ ಹಾಸನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಕಾಮಾಂಧ ಪ್ರಜ್ವಲ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಯಲ್ಲಿ 113 ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು ಪ್ರಜ್ವಲ್ ಬಂಧಿಸಿ, ಸಂತ್ರಸ್ತೆಯರನ್ನ ರಕ್ಷಿಸಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಪ್ರತಿಭಟನೆಯಲ್ಲಿ ಮಾಜಿ ಸಂಸದೆ ಸುಭಾಷಿಣಿ ಅಲಿ ಭಾಗಿಯಾಗಿದ್ದಾರೆ.
ಕಾಮಾಂಧ ಪ್ರಜ್ವಲ್ ವಿರುದ್ಧ ಸಿಡಿದೆದ್ದ ನಾರಿ‘ಶಕ್ತಿ’:
ಕಾಮಾಂಧ ಪ್ರಜ್ವಲ್ ರೇವಣ್ಣ ವಿರುದ್ಧ ನಾರಿಶಕ್ತಿ ಆಕ್ರೋಶ ಹೊರಹಾಕಿದೆ. ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಮಹಿಳಾ ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿವೆ. ಸಂಸದ ಪ್ರಜ್ವಲ್ ಅರೆಸ್ಟ್ ಆಗಲೇಬೇಕು. ಬಂಧಿಸಿ ಬಂಧಿಸಿ ಕಾಮುಕ ಪ್ರಜ್ವಲ್ನನ್ನು ಬಂಧಿಸಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸಂತ್ರಸ್ತರೇ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ, ರೇವಣ್ಣ ಕುಟುಂಬದ ಪಾಳೇಗಾರಿಕೆ ನಡೆಯೋದಿಲ್ಲವೆಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ: ಇಂದು ನಾಳೆಯೊಳಗೆ ಅಧಿಕೃತ ಪಟ್ಟಿ ಬಿಡುಗಡೆ ಸಾಧ್ಯತೆ
407 ಟೆಂಪೋದಲ್ಲಿ ಹೋರಾಟಕ್ಕೆ ಆಗಮಿಸಿದ ಜನ:
ಹಾಸನದಲ್ಲಿ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಜೋರಾಗಿದೆ. ಹಾಸನದ ಎನ್.ಆರ್.ಸರ್ಕಲ್ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ 2 ಟೆಂಪೋದಲ್ಲಿ ಆಗಮಿಸಿದ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಗ್ರಾಮೀಣ ಭಾಗದಿಂದ 407 ಟೆಂಪೋದಲ್ಲಿ ಜನರು ಬಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಪ್ರಜ್ವಲ್ ಆಗಮನ.. ಪೊಲೀಸ್ ಅಲರ್ಟ್:
ಇಂದು ಪ್ರಜ್ವಲ್ ರೇವಣ್ಣ ಆಗಮನ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು SIT ಮುಖ್ಯಸ್ಥರಾದ ಎಡಿಜಿಪಿ ಬಿ.ಕೆ .ಸಿಂಗ್ ಸಭೆ ನಡೆಸಿದ್ದಾರೆ. ಎಸ್ಐಟಿ ಮುಖ್ಯಸ್ಥ ಎಡಿಜಿಪಿ ಬಿ.ಕೆ.ಸಿಂಗ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾಸ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಏರ್ಪೋರ್ಟ್ನಲ್ಲಿ ಯಾವ ರೀತಿಯಾಗಿ ತಯಾರಿ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.