ತುಮಕೂರು : ಹೇಮಾವತಿ ನಮ್ಮದು. ಜೋರಾಗಿ ಕೂಗ್ರೋ, ಸಿಎಂ ಸಿದ್ದರಾಮಯ್ಯರ ಪಂಚೆ ಅಲ್ಲಾಡ್ಬೇಕಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಎಂ.ಟಿ. ಕೃಷ್ಣಪ್ಪ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಡಿ. ರಾಂಪುರ ಗ್ರಾಮದಲ್ಲಿ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರೋಧಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ನಮ್ಮ ಹೋರಾಟ ತುಮಕೂರು ಜಿಲ್ಲೆಯ ರೈತರ ಹಿತವನ್ನ ಕಾಪಾಡಬೇಕು ಅನ್ನೋದು ಮಾತ್ರ. ಇಲ್ಲಿ ಯಾವ ರಾಜಕೀಯವೂ ಇಲ್ಲ. ನಮಗೆ ಎಲ್ಲಾ ಮಠಾಧೀಶರ ಬೆಂಬಲ ಇದೆ. ಸ್ವಾಮೀಜಿಗಳು ಬಂದಿರುವುದರಿಂದ ನಮಗೆ ಮತ್ತಷ್ಟು ಬಲ ಬಂದಿದೆ. ಯಾಕಂದ್ರೆ ಸ್ವಾಮೀಜಿಯವರನ್ನ ಅರೆಸ್ಟ್ ಮಾಡೋಕಾಗಲ್ಲ ಎಂದು ಹೇಳಿದ್ದಾರೆ.
ಜಮೀನು ಏನು ಇವರ ಅಪ್ಪಂದೇನ್ರೀ?
ನಾವು ಕಾನೂನು ನಾವು ಗೌರವಿಸ್ತೀವಿ. ಆದ್ರೆ, ಕಾನೂನು ಉಲ್ಲಂಘನೆ ಮಾಡಿ ನಾಲೆ ತೋಡಿದೋರಿಗೆ ಏನು ಹೇಳಬೇಕು. ಅವರನ್ನ ಕಳ್ಳರು ಅನ್ನಬೇಕು, ಪೊಲೀಸರೆ ಅಂತಹ ಕಳ್ಳರಿಗೆ ಸಪೋರ್ಟ್ ಮಾಡಬೇಡಿ. ಈ ಕಾಮಗಾರಿ ಆದರೆ ಗುಬ್ಬಿಗೆ ಒಂದು ಹನಿ ನೀರು ಸಿಗಲ್ಲ. ನಾವು ಸಿ.ಎಸ್.ಪುರ ಹೋಬಳಿಯಲ್ಲಿ ಮುಚ್ಚಿಸಿದ್ದಿವಿ. ಜೆಸಿಬಿ ತನ್ನಿ ಇಲ್ಲಿಯೂ ಮುಚ್ಚಿಸೋಣ. ಯಾಕಂದ್ರೆ ಇದು ಕಾನೂನು ಬಾಹಿರ. ಜಮೀನು ಏನು ಇವರ ಅಪ್ಪಂದೇನ್ರೀ? ಭೂಸ್ವಾಧೀನ ಆಗಿಲ್ಲ ಅದು ಹೇಗೆ ಜಮೀನು ಮುಟ್ಟುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳ್ಳಂಬೆಳ್ಳದ ಕಳ್ಳಂಗೂ, ಗುಬ್ಬಿ ಕಳ್ಳಂಗೂ ಹೇಳಿದ್ದೀನಿ
ಇಲ್ಲಿ ನರಸತ್ತ ಕಾಂಗ್ರೆಸ್ ಲೀಡರ್ಗಳವ್ರೆ, ಅವ್ರಿಗೆ ಹೆದರಿಸಿ ಮಾಡ್ತಾವ್ರೆ. ಕಳ್ಳಂಬೆಳ್ಳದ ಕಳ್ಳಂಗೂ ಹೇಳಿದ್ದೀನಿ, ಗುಬ್ಬಿ ಕಳ್ಳಂಗೂ ಹೇಳಿದ್ದೀನಿ. ಪರೋಕ್ಷವಾಗಿ ಟಿ.ಬಿ. ಜಯಚಂದ್ರ, ಎಸ್.ಆರ್ .ಶ್ರೀನಿವಾಸ್ ಅವರಿಗೆ ಕಳ್ಳರು ಎಂದಿದ್ದಾರೆ. ಪೊಲೀಸ್ನವ್ರಿಗೆ ಹೇಳ್ತಿನಿ, ನೀವ್ಯಾರು ನಮಗೆ ತೊಂದರೆ ಕೊಡಬೇಡಿ. ನಾವು ನಾಲೆ ಮುಚ್ಚಿಸಿಕೊಂಡು ಹೋಗ್ತೇವೆ. ಏಯ್.. ದಿಲೀಪ ಜೆಸಿಬಿ ತರಿಸೋ, ಬೇಕಿದ್ರೆ ಅರೆಸ್ಟ್ ಮಾಡಲಿ ನಮ್ಮನ್ನ ಎಂದು ಶಾಸಕ ಕೃಷ್ಣಪ್ಪ ಹರಿಹಾಯ್ದಿದ್ದಾರೆ.